ಬೆಂಗಳೂರು: ಚಾಂದ್ರಮಾನ ಯುಗಾದಿ ಮುನ್ನಾ ದಿನವಾದ ಗುರುವಾರ ನಗರದಲ್ಲಿ ಹಬ್ಬದ ಖರೀದಿಯ ಭರಾಟೆ ಜೋರಾಗಿತ್ತು. ಮಾರುಕಟ್ಟೆಗಳಲ್ಲಿ ಮಾವು ಮತ್ತು ಬೇವಿನ ಸೊಪ್ಪು, ಮಲ್ಲಿಗೆ ಹೂವು, ಸೇವಂತಿಗೆ ಹೂವು, ಬಾಳೆಎಲೆ, ಪೂಜಾ ಸಾಮಗ್ರಿಗಳು, ಹಣ್ಣುಗಳ ವ್ಯಾಪಾರ ಹೆಚ್ಚಾಗಿ ಕಂಡುಬಂತು.
ಬಿಸಿಲ ಧಗೆಯ ನಡುವೆಯೂ ಕೆ.ಆರ್. ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ, ಗಾಂಧಿ ಬಜಾರು, ಜಯನಗರ, ರಾಜಾಜಿನಗರ, ಮಡಿವಾಳ, ಸುಂಕದಕಟ್ಟೆ, ಕೆ.ಆರ್.ಪುರ ಮಾರುಕಟ್ಟೆಗಳಲ್ಲಿ ಜನಸಂದಣಿ ಕಾಣಿಸಿಕೊಂಡಿತ್ತು.
ಹಬ್ಬದ ಪ್ರಯುಕ್ತ ಹೂವಿನ ಬೆಲೆಯಲ್ಲಿ ಏರಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಗುರುವಾರ ಕನಕಾಂಬರ ಹೂವಿನ ದರ ಕೆಜಿಗೆ ₹600 ತಲುಪಿತ್ತು. ಮಲ್ಲಿಗೆ ಮೊಗ್ಗು ₹300, ಕಾಕಡ ₹400, ರೋಸ್ ಕೆಜಿಗೆ ₹120, ಕನಕಾಂಬರ ಒಂದು ಮಾರಿಗೆ ₹200, ಸೇವಂತಿಗೆ ಒಂದು ಮಾರಿಗೆ ₹150, ಮಲ್ಲಿಗೆ ಮೋಳಕ್ಕೆ ₹50ಕ್ಕೆ ಮತ್ತು ಮಾವು, ಬೇವಿನ ಸೊಪ್ಪಿನ ಚಿಕ್ಕ ಕಟ್ಟು ₹10, ದೊಡ್ಡ ಕಟ್ಟು ₹20ಕ್ಕೆ ಮಾರಾಟವಾಗುತ್ತಿದ್ದವು.