ಬೆಂಗಳೂರು: ಒಂದೂವರೆ ವರ್ಷದ ಹಿಂದೆಯೇ ಘೋಷಣೆಯಾಗಿದ್ದರೂ ಚಿತ್ರೀಕರಣ ಪ್ರಾರಂಭವಾಗದೆ, ಶಾಂತಿಯುತವಾಗಿ ಕಾಯುತ್ತಿದ್ದ ನಿರ್ದೇಶಕ ಎಸ್ ಕೃಷ್ಣ ಅವರಿಗೆ ಸಿಹಿ ಸುದ್ದಿ. ರವಿಶಂಕರ್ ನಿರ್ದೇಶನದ ‘ಕೋಟಿಗೊಬ್ಬ-2’ ಸಿನೆಮಾದಲ್ಲಿ ನಿರತರಾಗಿದ್ದ ಸುದೀಪ್ ಕೊನೆಗೂ ಚಿತ್ರೀಕರಣಕ್ಕೆ ಸಮಯ ನೀಡಿದ್ದು, ಏಪ್ರಿಲ್ 20 ರಿಂದ ‘ಹೆಬ್ಬುಲಿ’ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.
ಸಂತಸ ಸುದ್ದಿಯೆಂದರೆ ನಿರ್ದೇಶಕನಾಗಿ ಭಡ್ತಿ ಹೊಂದಿರುವ ಸಿನೆಮ್ಯಾಟೋಗ್ರಾಫರ್ ಕೃಷ್ಣ ಈ ಸಿನೆಮಾವನ್ನು ಒಂದೇ ಹಂತದಲ್ಲಿ ಚಿತ್ರೀಕರಿಸಲಿದ್ದಾರಂತೆ. ಈ ಸಿನೆಮಾದ ಬಜೆಟ್ ಬರ್ರೋಬರಿ 25 ರಿಂದ 30 ಕೋಟಿ ಎಂದು ತಿಳಿಯಲಾಗಿದೆ.
“ನಾವು ಜಮ್ಮು ಮತ್ತು ಕಾಶ್ಮೀರ್, ಮೈಸೂರು, ಹೈದರಾಬಾದ್, ಬಳ್ಳಾರಿ, ಬೆಂಗಳೂರು, ಐಸ್ ಲ್ಯಾಂಡ್ ಮತ್ತು ನಾರ್ವೆಯಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. ‘ಹೆಬ್ಬುಲಿ’ಯಲ್ಲಿ ಸುದೀಪ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂವರು ಖಳನಾಯಕರಾದ ರವಿ ಶಂಕರ್, ಸಂಪತ್ ರಾಜ್ ಮತ್ತು ಕಬೀರ್ ದುಹಾನ್ ಸಿಂಗ್ ಅವರೊಂದಿಗೆ ರವಿಚಂದ್ರನ್ ಕೂಡ ನಟಿಸಲಿದ್ದಾರೆ” ಎಂದು ವಿವರಿಸುತ್ತಾರೆ ಕೃಷ್ಣ.
ಈಗ ನಾಯಕ ನಟಿಯರನ್ನು ಅಂತಿಮಗೊಳಿಸುವತ್ತ ಚಿತ್ತ ನೆಟ್ಟಿರುವ ಕೃಷ್ಣ “ರವಿಚಂದ್ರನ್ ಮತ್ತು ಸುದೀಪ್ ಅವರಿಗೆ ಇಬ್ಬರು ನಾಯಕ ನಟಿಯರನ್ನು ಅಂತಿಮಗೊಳಿಸಬೇಕಿದೆ. ದಿನಾಂಕಗಳು ಸಿಕ್ಕುವುದರ ಮೇರೆಗೆ ಈ ಆಯ್ಕೆ ನಡೆಯುತ್ತದೆ, ಮಾತುಕತೆ ಪ್ರಗತಿಯಲ್ಲಿದೆ” ಎಂದಿದ್ದಾರೆ.