ಬೆಂಗಳೂರು, ಏ. ೩- ನಗರದಲ್ಲೂ ಅಂತರ್ಜಲ ಮಟ್ಟ ಕುಸಿದಿದ್ದು, ಒಂದು ಸಾವಿರ ಅಡಿ ಆಳದವರೆಗೂ ಕೊಳವೆ ಬಾವಿ ಕೊರೆದರೂ ನೀರು ಸಿಗದಂತಹ ಪರಿಸ್ಥಿತಿ ಉಂಟಾಗಿದೆ.
ಬೆಂಗಳೂರು ನಗರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲೂ ಬಹುತೇಕ ಇದೇ ಪರಿಸ್ಥಿತಿ ಇದ್ದು, ಅಂತರ್ಜಲದ ಶೋಷಣೆಯಾಗುತ್ತಿದೆ. ಕರ್ನಾಟಕದಲ್ಲಿ ಅಂತರ್ಜಲ ಶೋಷಣೆ ಅವ್ಯಾಹತವಾಗಿ ನಡೆಯುತ್ತಿದ್ದು, ರಾಷ್ಟ್ರದ ಭೂಪದಲ್ಲಿ ಪರಿಸ್ಥಿತಿ ಅತಿ ಗಂಭೀರ ಎಂಬ ಸ್ಥಾನ ಪಡೆದಿದೆ. ಅಂತರ್ಜಲ ಸಂಪನ್ಮೂಲಗಳನ್ನು ಶೇ. 70 ರಷ್ಟು ಶೋಷಣೆ ಮಾಡಲಾಗಿದೆ.
ಜಲಸಂಪನ್ಮೂಲ ಸಚಿವಾಲಯದ ಇತ್ತೀಚಿನ ವರದಿ ಪ್ರಕಾರ, ಅಂತರ್ಜಲ ಶೋಷಣೆ ಮಾಡುತ್ತಿರುವ ರಾಜ್ಯಗಳ ಪಟ್ಟಿಯಲ್ಲೂ ಕರ್ನಾಟಕ ಸೇರಿದಂತೆ, ತಮಿಳುನಾಡು, ಪುದುಚೆರಿ, ಉತ್ತರ ಪ್ರದೇಶ, ಗುಜರಾತ್, ಲಕ್ಷದ್ವೀಪ್, ಡಯು ಹಾಗೂ ದಮನ್ ಸೇರಿವೆ.
ಜಿಲ್ಲೆಗಳಲ್ಲಿ ಹೆಚ್ಚು
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಂತರ್ಜಲ ವಿಭಾಗದ ಹೆಚ್ಚುವರಿ ನಿರ್ದೇಶಕಿ ಸಣ್ಣಬೋರಮ್ಮ ಸುಬ್ರಮಣಿ ಅವರ ಪ್ರಕಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬಾಗಲಕೋಟೆ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಅಂತರ್ಜಲದ ಶೋಷಣೆ ಹೆಚ್ಚಾಗಿದೆ.
ಇದೇ ರೀತಿ ಶೋಷಣೆ ಮುಂದುವರೆದರೆ, ಮುಂದೊಂದು ದಿನ ಭಾರಿ ಬೆಲೆ ತೆರಬೇಕಾಗುತ್ತದೆ. ವರುಣ ಕೃಪೆ ತೋರಿದರೆ, ಪರಿಸ್ಥಿತಿ ಬದಲಾಗಬಹುದು ಎಂದು ಅವರು ಹೇಳಿದ್ದಾರೆ.