ಕರ್ನಾಟಕ

ಮೈಸೂರಿನಲ್ಲಿ ‘ಜಾಗ್ವಾರ್’ ಸುದೀರ್ಘ ಚಿತ್ರೀಕರಣ ನಡೆಸಿದ ನಟ ನಿಖಿಲ್

Pinterest LinkedIn Tumblr

nikhil-gowda

ಬೆಂಗಳೂರು: ಮೈಸೂರಿನಲ್ಲಿ ‘ಜಾಗ್ವಾರ್’ ಸುದೀರ್ಘ ಚಿತ್ರೀಕರಣ ನಡೆಸಿ ನಟ ನಿಖಿಲ್ ಬೆಂಗಳೂರಿಗೆ ಹಿಂದಿರುಗಿದ್ದಾರೆ. ತಮ್ಮ ತಂದೆ ಎಚ್ ಡಿ ಕುಮಾರಸ್ವಾಮಿಯವರೇ ನಿರ್ಮಾಪಕರಾಗಿರುವ ಚಿತ್ರದಲ್ಲಿ ನಟನ ಮೇಲಿನ ಜವಾಬ್ದಾರಿ ಹೆಚ್ಚಾಗಿರುವುದಂತೂ ನಿಜ.

ಈ ಜವಾಬ್ದಾರಿಯನ್ನು ನಿಭಾಯಿಸುವ ಆತ್ಮವಿಶ್ವಾಸ ಹೊಂದಿರುವ ನಟ ಸದ್ಯಕ್ಕೆ ಮೈಸೂರಿನ ಚಿತ್ರೀಕರಣದಿಂದ ಬಿಡುವ ಮಾಡಿಕೊಂಡು ನೃತ್ಯ ತರಗತಿಗಳ ತರಬೇತಿ ಪಡೆಯುತ್ತಿದ್ದಾರೆ. “ಮೈಸೂರಿನ ಇನ್ಫೋಸಿಸ್ ಆವರಣದ ಹೊರಗೆ ಎರಡು ಪರಿಚಯಾತ್ಮಕ ಫೈಟ್ ದೃಶ್ಯಗಳ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದೇನೆ. ನಂತರ ಕ್ಯಾಂಪಸ್ ಒಳಗೆ ಒಂದು ಚಿತ್ರೀಕರಣ. ತದನಂತರ ೨೦ ದಿನಗಳ ವರೆಗೆ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯಲಿದೆ. ಸದ್ಯಕ್ಕೆ ಇವುಗಳಿಗೆ ಸೆಟ್ ನಿರ್ಮಾಣವಾಗುತ್ತಿರುವುದರಿಂದ ನನಗೆ ವಿರಾಮ ಸಿಕ್ಕಿದೆ” ಎನ್ನುತ್ತಾರೆ ನಿಖಿಲ್.

ನೂತನ ತಂತ್ರಜ್ಞಾನದ ‘ವೆಪನ್’ ಕ್ಯಾಮರಾ
ಉತ್ತಮ ಗುಣಮಟ್ಟದ ಚಿತ್ರೀಕರಣಕ್ಕೆ ಶ್ರಮಿಸುತ್ತಿರುವ ಚಿತ್ರತಂಡ ಇತ್ತೀಚಿನ ತಂತ್ರಜ್ಞಾನದ, ಸಾಮಾನ್ಯವಾಗಿ ಹಾಲಿವುಡ್ ನಲ್ಲಿ ಬಳಸುವ ‘ವೆಪನ್’ ಕ್ಯಾಮರಾ ಬಳಸುತ್ತಿದೆಯಂತೆ. “ಇದೇ ಮೊದಲ ಬಾರಿಗೆ ಭಾರತೀಯ ಸಿನೆಮಾಗಳಲ್ಲಿ ವೆಪನ್ ಕ್ಯಾಮರಾ ಬಳಸುತ್ತಿರುವುದು. ಸಿನೆಮ್ಯಾಟೋಗ್ರಾಫರ್ ಮನೋಜ್ ಪರಮಹಂಸ ಅವರ ವಿಶೇಷತೆ ಏನೆಂದರೆ, ಅವರು ಅಂತರಾಷ್ಟ್ರೀಯ ಛಾಯಾಗ್ರಹಕರ ಜೊತೆ ನಿರಂತರ ಸಂಪರ್ಕದಲ್ಲಿರುವುದಲ್ಲದೆ ತಮ್ಮ ತಿಳುವಳಿಕೆಯನ್ನು ವೃದ್ಧಿಸಿಕೊಳ್ಳುತ್ತಿರುತ್ತಾರೆ. ಇದಿನ್ನು ಬಾಲಿವುಡ್ ಗೂ ಬಂದಿಲ್ಲ, ಏಕೆಂದರೆ ಇದನ್ನು ಮುಂಗಡವಾಗಿ ಕಾಯ್ದಿರಿಸಬೇಕು. ನನ್ನ ತಂದೆ ನನ್ನ ಹುಟ್ಟುಹಬ್ಬಕ್ಕೆ ಇದನ್ನು ತರಿಸಿದರು ಆದರೆ ವಿದೇಶಿ ತೆರಿಗೆ ನಿಯಮಗಳನ್ನು ದಾಟಿ ಬರಲು ಹೆಚ್ಚಿನ ಸಮಯ ಹಿಡಿಯಿತು. ಇದನ್ನು ಎರಡನೇ ಕ್ಯಾಮರಾವಾಗಿ ಬಳಸುತ್ತಿದ್ದೇವೆ. ಇದು ಸಣ್ಣದಾಗಿದ್ದರೂ, ತೆರೆಯ ಮೇಲೆ ಮಾಂತ್ರಿಕತೆ ಸೃಷ್ಟಿಸುತ್ತದೆ” ಎಂದು ವಿವರಿಸುತ್ತಾರೆ ನಿಖಿಲ್.

ಅಕ್ಟೋಬರ್ ೮ ಕ್ಕೆ ಬಿಡುಗಡೆ?
ಸದ್ಯದ ನಿಗದಿಯ ಪ್ರಕಾರ ನಟನ ತಂದೆ ಅಕ್ಟೋಬರ್ ೮ ರ ಬಿಡುಗಡೆಗೆ ಪ್ರಯತ್ನಿಸುವಂತೆ ಸೂಚಿಸಿದ್ದು ಅದಕ್ಕಾಗಿ ಭರದ ಚಿತ್ರೀಕರಣ ಸಾಗುತ್ತಿದೆಯಂತೆ. “ಆಗ ದಸರಾ ಹಬ್ಬ ಬರುವುದರಿಂದ ಅಪ್ಪನಿಗೆ ಅದು ಒಳ್ಳೆಯ ಸಮಯ ಎಂದೆನಿಸಿದೆ. ನಾವು ಆ ಗುರಿ ಮುಟ್ಟಲು ತಯಾರಾಗಿದ್ದೇವೆ” ಎನ್ನುತ್ತಾರೆ.

ವಾಣಿಜ್ಯ ಚಿಂತನೆಗಳು
ನಟನಾಗಷ್ಟೇ ಅಲ್ಲದೆ, ನಿರ್ಮಾಪಕನಾಗಿಯೂ ನಾನು ಚಿಂತಿಸುತ್ತೇನೆ ಎನ್ನುವ ನಿಖಿಲ್ ತಂದೆಯ ಹಣವನ್ನು ಪೋಲಾಗದಂತೆ ನೋಡಿಕೊಳ್ಳುತ್ತೇನೆ ಎನ್ನುತ್ತಾರೆ “‘ಜಾಗ್ವಾರ್’ ಮೇಲೆ ನಾವು ವ್ಯಯಿಸುತ್ತಿರುವ ಹಣವನ್ನು, ಕರ್ನಾಟಕದಲ್ಲೇ ಹಿಂತೆಗೆದುಕೊಳ್ಳಬಹುದೆಂಬ ಭರವಸೆ ಇದೆ” ಎನ್ನುತ್ತಾರೆ.

ಬಾಹುಬಲಿ ನಿರ್ದೇಶಕ ರಾಜಮೌಳಿ ಅವರ ತಂದೆ ವಿಜೇಂದ್ರ ಪ್ರಸಾದ್ ಕಥೆ ರಚಿಸಿದ್ದು ಮಹದೇವ್ ಸಿನೆಮಾ ನಿರ್ದೇಶಿಸುತ್ತಿದ್ದಾರೆ.

ಎರಡನೆ ಸಿನೆಮಾಗೂ ಸಿದ್ಧತೆ
ನಿಖಿಲ್ ಅವರೇ ಹೇಳುವಂತೆ ಅವರು ಈಗಾಗಲೇ ಎರಡನೇ ಸಿನೆಮಾಗೂ ಸಿದ್ಧತೆ ನಡೆಸಿದ್ದಾರಂತೆ, ಅದಕ್ಕೂ ಕೂಡ ವಿಜೇಂದ್ರ ಪ್ರಸಾದ್ ಅವರೇ ಕಥೆ ರಚಿಸಿದ್ದು “ಸದ್ಯದ ಸಿನೆಮಾಗಿಂತಲೂ ವಿಭಿನ್ನ ಪಾತ್ರವಿರುತ್ತದೆ. ಸ್ಕ್ರಿಪ್ಟ್ ಬಹಳ ಮೆಚ್ಚುಗೆಯಾಗಿದೆ. ಮಗಧೀರ ಸಿನೆಮಾದಂತೆ ಬಹಳ ಪಕ್ವವಾಗಿದೆ ಕಥೆ ಆದರೆ ಖಂಡಿತಾ ಐತಿಹಾಸಿಕ ಸಿನೆಮಾ ಅಲ್ಲ. ನಿರ್ದೇಶಕ ಯಾರೆಂದು ಅಂತಿಮವಾಗಿಲ್ಲ. ನಾವು ತೆಲುಗಿನ ಖ್ಯಾತ ನಿರ್ದೇಶಕರ ಜೊತೆಗೆ ಮಾತುಕತೆ ನಡೆಸಿದ್ದೇವೆ. ಪೂರಿ ಜಗನ್ನಾಥ್ ಅವರೊಂದಿಗೂ ಮಾತುಕತೆ ನಡೆದಿದೆ. ಬೇರೆ ನಿರ್ಮಾಣ ಸಂಸ್ಥೆಗಳ ಅಡಿಯಲ್ಲೂ ನನಗೆ ನಟಿಸುವ ಆಸೆಯಿದೆ. ಆದರೆ ನಮ್ಮ ತಂದೆಯವರು ಬೇರೆ ಕಡೆ ಹೋಗುವ ಮುಂಚೆ ಇಲ್ಲಿಯೇ ೩-೪ ಸಿನೆಮಾಗಳನ್ನು ಮಾಡುವಂತೆ ಹೇಳುತ್ತಿದ್ದಾರೆ” ಎನ್ನುತ್ತಾರೆ.

Write A Comment