ಬೆಂಗಳೂರು: ಪರೀಕ್ಷೆಗಳಲ್ಲಿ ಸ್ಕ್ವಾಡ್ ವಿದ್ಯಾರ್ಥಿಗಳನ್ನು ತಪಾಸಣೆ ಮಾಡುವುದು ಸಾಮಾನ್ಯ. ಆದರೆ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಲು ಕೆಲವು ನಿಮಿಷಗಳ ವರೆಗೆ ಉತ್ತರ ಪತ್ರಿಕೆಯನ್ನೇ ಕೊಡದಿರುವುದನ್ನು ಎಲ್ಲಾದರೂ ಕೇಳಿದ್ದೀರಾ? ಪದವಿ ಪೂರ್ವ(ಪಿಯು) ಪರೀಕ್ಷೆಯಲ್ಲಿ ಇಂತಹ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಹಲವು ಕಾಲೇಜುಗಳಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಂದ ಇಂತಹ ಆರೋಪ ಕೇಳಿಬಂದಿದ್ದು, ರಾಸಾಯನ ಶಾಸ್ತ್ರ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳನ್ನು ಪ್ಲೈಯಿಂಗ್ ಸ್ಕ್ವಾಡ್ ತಪಾಸಣೆ ಮಾಡುವುದರೊಂದಿಗೆ ಉತ್ತರ ಪತ್ರಿಕೆಗಳನ್ನು ಪಡೆದು ಪರೀಕ್ಷೆ ಬರೆಯುವುದಕ್ಕೆ ಕಿರಿಕಿರಿ ಉಂಟು ಮಾಡಿ, ಒತ್ತಡ ಹೆಚ್ಚಿಸಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
“ಶೇಷಾದ್ರಿಪುರಂ ಕಾಲೇಜು ನನ್ನ ಪರೀಕ್ಷಾ ಕೇಂದ್ರವಾಗಿತ್ತು. ಎಕ್ಸಾಮ್ ಹಾಲ್ ನಲ್ಲಿ 25 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದವು. ಸ್ಕ್ವಾಡ್ ನವರು ತಪಾಸಣೆ ನಡೆಸುವುದರೊಂದಿಗೆ, ನಮ್ಮ ಉತ್ತರ ಪತ್ರಿಕೆಗಳನ್ನು ಪಡೆದು ಅದನ್ನೂ ತಪಾಸಣೆ ಮಾಡಿದರು, 5 ನಿಮಿಷಗಳ ನಂತರ ಉತ್ತರ ಪತ್ರಿಕೆಗಳನ್ನು ವಾಪಸ್ ನೀಡಿದರು, ಇದರಿಂದ ನಮಗೆ ಒತ್ತಡ ಹೆಚ್ಚಾಯಿತು ಎಂದು ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದಾರೆ.
ನಮಗೆ 5 ನಿಮಿಷವೂ ಮುಖ್ಯವಾಗಿರುತ್ತದೆ. ಆದರೆ ಸ್ಕ್ವಾಡ್ ನವರು ಉತ್ತರ ಪತ್ರಿಕೆಯನ್ನು ಪಡೆದು 5 ನಿಮಿಷಗಳ ನಂತರ ವಾಪಸ್ ನೀಡಿದ್ದರಿಂದ ಕಿರಿಕಿರಿ ಉಂಟಾಗಿ ಏಕಾಗ್ರತೆಗೆ ಅಡ್ಡಿಯುಂಟಾಯಿತು ಎಂದು ಇನ್ನು ಕೆಲವು ವಿದ್ಯಾರ್ಥಿಗಳು ಹೇಳಿದ್ದಾರೆ.
ಶೇಷಾದ್ರಿಪುರಂ ಕಾಲೇಜು ಪರೀಕ್ಷಾ ಕೇಂದ್ರ ಮಾತ್ರವಲ್ಲದೇ ಇನ್ನೂ ಕೆಲವು ಪರೀಕ್ಷಾ ಕೆಂದ್ರದಲ್ಲಿ ವಿದ್ಯಾರ್ಥಿಗಳಿಗೆ ಇಂಥದ್ದೇ ಅನುಭವವಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಆದರೆ ಪದವಿ ಪೂರ್ವ ಶಿಕ್ಷಣ ಇಲಾಖೆ ಮಾತ್ರ ಸ್ಕ್ವಾಡ್ ಗಳ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಸ್ಕ್ವಾಡ್ ಗಳು ಪರೀಕ್ಷಾ ಕೇಂದ್ರಕ್ಕೆ ಯಾವುದೇ ಕ್ಷಣದಲ್ಲಿ ಬೇಕಾದರೂ ಭೇಟಿ ನೀಡಬಹುದು ಎಂದು ಹೇಳಿದ್ದಾರೆ. ಆದರೆ ಉತ್ತರ ಪತ್ರಿಕೆ ಪಡೆದು 5 ನಿಮಿಷಗಳ ನಂತರ ವಾಪಸ್ ಕೊಟ್ಟಿರುವುದಕ್ಕೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದು ಈ ವಿಷಯವನ್ನು ಪಿಯು ಶಿಕ್ಷಣ ಇಲಾಖೆಗೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ.