ಆಧುನಿಕ ಜೀವನಶೈಲಿ ಹಾಗೂ ಆರೋಗ್ಯದ ಬಗ್ಗೆ ಕಾಳಜಿಯ ಕೊರತೆಯಿಂದಾಗಿ ಪ್ರತಿ 100 ಮಂದಿಯಲ್ಲಿ 17 ಮಂದಿ ಮೂತ್ರಪಿಂಡ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಆಘಾತಕಾರಿ ವಿಷಯ ವೆಂದರೆ ಶೇ. 6 ರಷ್ಟು ಮಂದಿ 3ನೇ ಹಂತದ ಅನಾರೋಗ್ಯ ತಲುಪಿದ್ದು ತುರ್ತು ಚಿಕಿತ್ಸೆ ನಿರೀಕ್ಷೆಯಲ್ಲಿದ್ದಾರೆ. ಇಂತಹ ಮೂತ್ರ ಪಿಂಡ ಕಾಯಿಲೆಯನ್ನು ಸೂಕ್ತ ಸಮಯದಲ್ಲಿ ಪತ್ತೆ ಹಚ್ಚಿ ಅಗತ್ಯ ಚಿಕಿತ್ಸೆ ನೀಡಿದರೆ ಅಪಾಯದಿಂದ ಪಾರಾಗಬಹುದು. ಈ ಬಗ್ಗೆ ಜನ ಸಾಮಾನ್ಯರಲ್ಲಿ ಜಗೃತಿ ಮೂಡಿಸುವ ಸಲುವಾಗಿಯೇ ರೀಗಲ್ ಆಸ್ಪತ್ರೆಯು ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ಮನೆ-ಮನೆಗೂ ತಲುಪಿ ಮೂತ್ರಪಿಂಡದ ಪ್ರತಿಕೃತಿ ನೀಡುವ ಮೂಲಕ ಅಚ್ಚರಿ ಹಾಗೂ ಜಗೃತಿ ಎರಡನ್ನೂ ನಾಗರೀಕರಲ್ಲಿ ಉಂಟು ಮಾಡಿತು.
ಸೂಕ್ತ ಸಮಯದಲ್ಲಿ ಕಾಯಿಲೆ ಪತ್ತೆ ಹಚ್ಚಿ
ಈ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಖ್ಯಾತ ಯೂರಾಲಜಿಸ್ಟ್ ಹಾಗೂ ರೀಗಲ್ ಆಸ್ಪತ್ರೆ ಸಿಇಒ ಡಾ. ವಿ. ಸೂರಿ ರಾಜು ಅವರು ಕಿಡ್ನಿ ಆರೋಗ್ಯದತ್ತ ದೃಢ ಹೆಜ್ಜೆ ಇಡಲು ಕಿಡ್ನಿಯಥಾನ್ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ವಿಶ್ವಾದ್ಯಂತ ಸಾರ್ವಜನಿಕರು, ಸೆಲೆಬ್ರೆಟಿಗಳು ಹಾಗೂ ವೃತ್ತಪರರನ್ನು ಒಗ್ಗೂಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ನಡಿಗೆ, ಓಟ ಹಾಗೂ ಸೈಕ್ಲಿಂಗ್ ಮೂಲಕ ಮೂತ್ರಪಿಂಡ ಆರೋಗ್ಯದ ಬಗ್ಗೆ ಜಗೃತಿ ಮೂಡಿಸಲಿದ್ದೇವೆ.
ವಿಶ್ವಾದ್ಯಂತ ಲಕ್ಷಾಂತರ ಜನರ ಅನಾರೋಗ್ಯಕ್ಕೆ ಕಾರಣವಾಗಿರುವ ಕಿಡ್ನಿ ಸಮಸ್ಯೆ ಕುರಿತು ಸಾಮಾನ್ಯ ಜನರಿಗೆ ಅರಿವು ಮೂಡಿಸಲು ಹಾಗೂ ಚಿಕ್ಕ ಮಕ್ಕಳಲ್ಲಿನ ಕಿಡ್ನಿ ಸಮಸ್ಯೆ ಬಗ್ಗೆ ಅಗತ್ಯ ಎಚ್ಚರಿಕೆಗಳ ಬಗ್ಗೆ ತಿಳಿಸಲು ಅಭಿಯಾನ ಏರ್ಪಡಿಸಿದ್ದೇವೆ ಎಂದರು. ಮೂತ್ರಪಿಂಡ ಕಾಯಿಲೆಗೆ ವಯೋಮಿತಿ ಇಲ್ಲ. ಅನುವಂಶಿಕತೆ, ಜನನ ಸಮಯದಲ್ಲಿನ ನ್ಯೂನ್ಯತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಚಿಕ್ಕ ಮಕ್ಕಳಲ್ಲೂ ಕಿಡ್ನಿ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು.
ಮಕ್ಕಳಿಗೆ ಅಪಾಯಕಾರಿ
ಮಕ್ಕಳಿಗೆ ಮೂತ್ರಪಿಂಡ ವೈಫಲ್ಯ ಉಂಟಾಗಲು ಹಲವು ಕಾರಣಗಳಿವೆ. ಆರಂಭ ಹಂತದಲ್ಲೇ ಸೂಕ್ತ ಚಿಕಿತ್ಸೆ ನೀಡದಿದ್ದರೆ ದೀರ್ಘಕಾಲದಲ್ಲಿ ಜೀವಕ್ಕೆ ಕುಂದುಂಟು ಮಾಡುತ್ತದೆ. ತೀವ್ರ ಮೂತ್ರಪಿಂಡ ರೋಗ (ಅಕ್ಯೂಟ್ ಕಿಡ್ನಿ ಡಿಸೀಜ್ -ಎಕೆ ಐ) ಇದು ಅತಿ ಶೀಘ್ರದಲ್ಲೇ ಅಪಾಯಕಾರಿ ಹಂತಕ್ಕೆ ತಲುಪುವ ಮಾದರಿ. ಚಿಕಿತ್ಸೆ ನೀಡಿದರೂ ಜೀವನ ಪರ್ಯಂತ ಕಾಡಬಲ್ಲ ಸಮಸ್ಯೆಗಳನ್ನು ಉಳಿಸಿಬಿಡುತ್ತದೆ. ಮತ್ತೊಂದು ಕ್ರೋನಿಕ್ ಕಿಡ್ನಿ ಡಿಸೀಜ್ (ಸಿಕೆಡಿ). ದೀರ್ಘಕಾಲಿಕ ಮೂತ್ರಪಿಂಡ ಕಾಯಿಲೆ ಎಂಬ ಸಿಕೆಡಿ ಚಿಕಿತ್ಸೆಯಿಂದಲೂ ಗುಣಮುಖವಾಗದೆ ಸಮಯ ಕಳೆದಂತೆ ಹೆಚ್ಚು ಸಮಸ್ಯೆ ಉಂಟು ಮಾಡುತ್ತಾ ಹೋಗುತ್ತದೆ.
ಸಿಕೆಡಿ ಸಮಸ್ಯೆ ಕ್ರಮೇಣವಾಗಿ ಕಿಡ್ನಿ ವೈಫಲ್ಯದತ್ತ ಕೊಂಡೊಯ್ಯುತ್ತದೆ. ಇದಕ್ಕೆ ಕಿಡ್ನಿ ಕಸಿ ಅಥವಾ ನಿತ್ಯ ಡಯಾಲಿಸಿಸ್ ಮಾಡಿಸುವ ಮೂಲಕ ರಕ್ತ ಶುದ್ಧೀಕರಣ ಮಾಡುವುದೊಂದೇ ಪರಿಹಾರ. ಮಕ್ಕಳಲ್ಲಿನ ಕಿಡ್ನಿ ಸಮಸ್ಯೆಗಳು ಜೀವಕ್ಕೆ ಅಪಾಯ ತರುವ ಸಾಧ್ಯತೆ ಹೆಚ್ಚಿರುತ್ತದೆ. ಮಕ್ಕಳ ಅವಧಿಯಲ್ಲಿ ಕಿಡ್ನಿ ಸಮಸ್ಯೆ ಹೊಂದಿದ್ದರೆ ಯವ್ವನಾವ್ಯವಸ್ಥೆಯಲ್ಲಿ ಕಿಡ್ನಿ ಸಮಸ್ಯೆ ಅಂತಿಮ ಹಂತಕ್ಕೆ ತಲುಪಿರುತ್ತದೆ. ರಾಜ್ಯದಲ್ಲಿ ಇಂತಹ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಒಟ್ಟಾರೆ ರಾಜ್ಯದಲ್ಲಿ ನಿತ್ಯ 2 ಲಕ್ಷ ಮಂದಿ ಡಯಾಲಿಸಿಸ್ಗೆ ಒಳಪಡುತ್ತಿದ್ದಾರೆ ಎಂದು ಡಾ.ಸೂರಿ ರಾಜು ಹೇಳುತ್ತಾರೆ.
ಉಚಿತ ಶಸ್ತ್ರಚಿಕಿತ್ಸೆ ವಾಗ್ದಾನಕ್ಕೆ ರೀಗಲ್ ಆಸ್ಪತ್ರೆ ಬದ್ಧ
ಬೆಂಗಳೂರು ನಗರ ಜನತೆಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಲು ರೀಗಲ್ ಆಸ್ಪತ್ರೆ ಬದ್ಧವಾಗಿದೆ. ಈ ಮೊದಲು ಉಚಿತ ಶಸ್ತ್ರಚಿಕಿತ್ಸೆಗಳನ್ನು ಮಾಡುವುದಾಗಿ ವಾಗ್ದಾನ ಮಾಡಿದ್ದೆವು. ಇದರಂತೆ 10 ಮಂದಿ ರೋಗಿಗಳಿಗೆ ಉಚಿತವಾಗಿ ಹಾಗೂ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿದ್ದೇವೆ. ಇನ್ನೂ ಹಲವು ಉಚಿತ ಶಸ್ತ್ರಚಿಕಿತ್ಸೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದು ಕಿಡ್ನಿಯಥಾನ್ ಸಮಯದಲ್ಲಿ ಮಾಡಲಿದ್ದೇವೆ. ಆಸ್ಪತ್ರೆಯಲ್ಲಿ ಈಗಾಗಲೇ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ರೋಗಿಗಳು ಸಹ ಕಿಡ್ನಿಯ ಥಾನ್ ಅಭಿಯಾನ ದಲ್ಲಿ ಭಾಗ ವಹಿಸಲಿದ್ದಾರೆ ಎಂದು ಹೇಳಿದರು.
ಮೂತ್ರಪಿಂಡ ಸುರಕ್ಷತೆ
ಕಿಡ್ನಿಯಥಾನ್ ಅಭಿಯಾನ ದಲ್ಲಿ ಮಾತನಾಡಿದ ರೀಗಲ್ ಆಸ್ಪತ್ರೆ ವೈದ್ಯರು, ಕಿಡ್ನಿ ಸಮಸ್ಯೆಗಳು ಸೈಲೆಂಟ್ ಕಿಲ್ಲರ್ಸ್ ಇದ್ದ ಹಾಗೆ. ತುಂಬಾ ಅಪಯಕಾರಿ ಹಾಗೂ ಗುಣಮಟ್ಟದ ಜೀವನ ಹಾಳು ಮಾಡುವಂತಹವು. ಭವಿಷ್ಯದಲ್ಲಿ ಕಿಡ್ನಿ ಸಮಸ್ಯೆ ಬಾರದಂತೆ ತಡೆಯಲು ಅನೇಕ ಮಾರ್ಗಗಳಿವೆ. ಚಟುವಟಿಕೆಯುಕ್ತ ಜೀವನ ಹಾಗೂ ವ್ಯಾಯಾಮ ದೈಹಿಕ ಸದೃಢತೆಯು ರಕ್ತದೊತ್ತಡ ಕಡಿಮೆ ಮಾಡುವ ಮೂಲಕ ಕಿಡ್ನಿ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ. ಹೀಗಾಗಿ ನಿರಂತರ ಚಟುವಟಿಕೆ ಹಾಗೂ ವ್ಯಾಯಾಮ ದೀರ್ಘ ಕಾಲಿಕ ಮೂತ್ರಪಿಂಡ ಕಾಯಿಲೆಯನ್ನು ದೂರವಿರಿಸುತ್ತದೆ.
ರಕ್ತದೊತ್ತಡ ಹಾಗೂ ಮಧುಮೇಹ ನಿಯಂತ್ರಣ
ಮಧುಮೇಹ ಸಮಸ್ಯೆಯುಂದ ಬಳಲುತ್ತಿರುವ ಶೇ. 50ರಷ್ಟು ಮಂದಿ ಕಿಡ್ನಿ ವೈಫಲ್ಯಕ್ಕೆ ಒಳಗಾಗುತ್ತಾರೆ. ಹೀಗಾಗಿ ಮಧುಮೇಹ ನಿಯಂತ್ರಣಕ್ಕಾಗಿ ನಿರಂತರ ಪರೀಕ್ಷೆ ಹಾಗೂ ಕಿಡ್ನಿ ಪರೀಕ್ಷೆ ಮಾಡಿಕೊಳ್ಳುತ್ತಿರಬೇಕು. ಪ್ರಾರಂಭಿಕ ಹಂತದಲ್ಲೇ ಪತ್ತೆ ಹೆಚ್ಚಿದರೆ ಮಧುಮೇಹದಿಂದ ವೈಫಲ್ಯ ಹೊಂದಿರುವ ಕಿಡ್ನಿ ಸಮಸ್ಯೆ ನಿವಾರಣೆ ಮಾಡಬಹುದು. ಹೀಗಾಗಿ ಮಧುಮೇಹ ನಿಯಂತ್ರಣದಲ್ಲಿಡುವ ಬಗ್ಗೆ ವೈದ್ಯರ ಸತತ ಸಂಪರ್ಕದಲ್ಲಿರಬೇಕು.
ರಕ್ತದೊತ್ತಡ
ರಕ್ತದೊತ್ತಡ ಸಮಸ್ಯೆ ಸ್ಟ್ರೋಕ್ ಅಥವಾ ಹೃದಯಾಘಾತ ಸಮಸ್ಯೆಗೆ ಕಾರಣ ಎಂಬುದು ಬಹುತೇಕರಿಗೆ ಗೊತ್ತಿದೆ. ಆದರೆ, ಇದೇ ಸಮಸ್ಯೆ ಕಿಡ್ನಿ ವೈಫಲ್ಯಕ್ಕೂ ಕಾರಣ ಎಂಬುದು ಕೆಲವರಿಗಷ್ಟೇ ತಿಳಿದಿರಬಹುದು. ರಕ್ತದೊತ್ತಡ ನಿಯಂತ್ರಣದಲ್ಲಿಡಲು ಕಠಿಣ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಕಿಡ್ನಿ ಸಮಸ್ಯೆ, ಮಧುಮೇಹ, ಅತಿ ಕೊಬ್ಬು ಹಾಗೂ ವ್ಯಾಸ್ಕುಲರ್ ರೋಗಗಳಿಗೆ ಕಾರಣವಾಗ್ತುದೆ. ಆರೋಗ್ಯಕರ ಆಹಾರ ಸೇವನೆ, ದೇಹದ ತೂಕ ಮಿತಿಯಲ್ಲಿಡುವುದು,ಉಪ್ಪು ಸೇವನೆ ಕಡಿಮೆ ಮಾಡಬೇಕು, ಒಂದು ದಿನದ ಉಪ್ಪು ಸೇವನೆ 5-6 ಗ್ರಾಂಗಿಂತ ಹೆಚ್ಚಿರಬಾರದು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ಉಪ್ಪು ಸೇವನೆ ನಿಯಂತ್ರಣದಲ್ಲಿಡಲು ಸಂಸ್ಕರಿಸಿದ ಆಹಾರ, ರೆಸ್ಟೋರೆಂಟ್ ಆಹಾರ ಸೇವಿಸಬೇಕು. ಸಿದ್ಧಪಡಿಸಿದ ಆಹಾರಕ್ಕೆ ಉಪ್ಪು ಸೇರಿಸಿ ಸೇವಿಸಬಾರದು.
ಸತತ ದ್ರವ ಪದಾರ್ಥ ಸೇವನೆ
ನೀರಿನ ಹೆಚ್ಚು ಸೇವನೆಯಿಂದ ಕಿಡ್ನಿಯಲ್ಲಿನ ಸೋಡಿಯಂ ಶುದ್ಧವಾಗುತ್ತದೆ. ಯೂರಿಯಾ, ಟಾಕ್ಸಿನ್ಸ್ ಶುದ್ಧಗೊಂಡು ಕಿಡ್ನಿ ಸಮಸ್ಯೆ ಕಡಿಮೆಯಾಗುತ್ತದೆ. ಈಗಾಗಲೇ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಹೊಂದಿರುವವರು ನಿತ್ಯ 2 ರಿಂದ 3 ಲೀಟರ್ ನೀರು ಸೇವಿಸಿದರೆ ಸಮಸ್ಯೆ ತೀವ್ರವಾಗುವುದಿಲ್ಲ.
ಧೂಮಪಾನ ಮಾಡಬಾರದು
ಧೂಮಪಾನದಿಂದ ಕಿಡ್ನಿಗೆ ಹರಿಯುವ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ. ಕಿಡ್ನಿಗೆ ರಕ್ತ ಹರಿಯುವಿಕೆ ಕಡಿಮೆಯಾದಂತೆ ಸೂಕ್ತವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಧೂಮಪಾನವು ಕಿಡ್ನಿ ಕ್ಯಾನ್ಸರ್ ಸಾಧ್ಯತೆಗಳನ್ನು ಶೇ. 50ರಷ್ಟು ಹೆಚ್ಚಿಸುತ್ತದೆ.
ಔಷಧ ಸೇವನೆ ಬಗ್ಗೆ ಎಚ್ಚರ
ಇಬುಫ್ರೊಫೆನ್ನಂತಹ ಔಷಧಿಗಳ ಸೇವನೆ ಕಿಡ್ನಿ ವೈಫಲ್ಯ ಅಥವಾ ತೀವ್ರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಿಮ್ಮ ಕಿಡ್ನಿ ಆರೋಗ್ಯವಂತವಾಗಿದ್ದರೆ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಇಂತಹ ಔಷಧ ತೆಗೆದುಕೊಳ್ಳಬಹುದು. ಕಿಡ್ನಿಯಲ್ಲಿ ದೀರ್ಘಕಾಲಿಕ ನೋವಿದ್ದರೆ, ಜತೆಗೆ ಬೆನ್ನು ನೋವು ಇದ್ದರೆ ವೈದ್ಯರನ್ನು ಸಂಪರ್ಕಿಸಿಯೇ ಮುಂದಿನ ತೀರ್ಮಾನ ತೆಗೆದುಕೊಳ್ಳಬೇಕು.