ಉಗ್ರಂ, ರಥಾವರ ಸಿನಿಮಾದ ಯಶಸ್ಸಿನಲ್ಲಿರುವ ನಟ ಶ್ರೀಮುರುಳಿ ಮತ್ತೊಂದು ಸಿನಿಮಾಗೆ ಸಿದ್ಧರಾಗುತ್ತಿದ್ದಾರೆ. ಜಯಣ್ಣ ನಿರ್ಮಾಣದಲ್ಲಿ ಸೆಟ್ಟೇರಲಿರುವ ಶ್ರೀ ಮುರುಳಿ ಅವರ ಮುಂದಿನ ಸಿನಿಮಾವನ್ನು ನರ್ತನ್ ನಿರ್ದೇಶನ ಮಾಡಲಿದ್ದಾರೆ. ಶ್ರೀ ಮುರುಳಿ ಅವರ ಚಿತ್ರವನ್ನು ನಿರ್ದೇಶಿಸುವ ಮೂಲಕ ನರ್ತನ್ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಪರಿಚಯವಾಗುತ್ತಿದ್ದಾರೆ.
ಮುಂದಿನ ಚಿತ್ರದ ತಯಾರಿಯಲ್ಲಿರುವಾಗಲೇ ಶ್ರೀಮುರುಳಿ ಅಲೆಮಾರಿ ಖ್ಯಾತಿಯ ಸಂತೋಶ್ ಕುಮಾರ್( ಸಂತು) ನಿರ್ದೇಶನದಲ್ಲಿ ನಟನೆ ಮಾಡಲು ಆಸಕ್ತಿ ತೋರಿದ್ದಾರಂತೆ. ಗಾಂಧಿನಗರದ ಸುದ್ದಿಯ ಪ್ರಕಾರ ಸಂತು ಬರೆದಿರುವ ಸ್ಕ್ರಿಪ್ಟ್ ನ್ನು ಶ್ರೀಮುರುಳಿ ಮೆಚ್ಚಿದ್ದು ಈ ಚಿತ್ರವನ್ನು ಮಂಡ್ಯ ಟು ಮುಂಬೈ ಚಿತ್ರದ ನಿರ್ಮಾಪಕರು ನಿರ್ಮಾಣ ಮಾಡಲಿದ್ದಾರೆ.
ಚಿತ್ರ ನಿರ್ಮಾಣದ ಬಗ್ಗೆ ಮಾತುಕತೆ ಅಂತಿಮ ಹಂತದಲ್ಲಿದ್ದು, 90 ರ ನೈಜ ಘಟನೆ ಆಧಾರಿತ ಕಥೆಯಾಗಿರುವುದರಿಂದ ಶ್ರೀ ಮುರುಳಿ ಸಹ ಸಂತೋಶ್ ಕುಮಾರ್ ನಿರ್ದೇಶನದಲ್ಲಿ ಅಭಿನಯಿಸಲು ಉತ್ಸುಕರಾಗಿದ್ದಾರೆಂದು ಹೇಳಲಾಗುತ್ತಿದೆ.
ಅಂತಿಮ ಹಂತದ ಮಾತುಕತೆ ಮುಕ್ತಾಯವಾದ ನಂತರ ಸಿನಿಮಾ ಚಿತ್ರೀಕರಣದ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ. ಸ್ಪೆಟೆಂಬರ್ ನಲ್ಲಿ ಚಿತ್ರೀಕರಣ ನಡೆಯುವ ಸಾಧ್ಯತೆ ಇದೆ.