ಲಖನೌ: ಬಾಕಿ ಹಣ ಪಾವತಿಸುವಂತೆ ನೋಟೀಸ್ ನೀಡಿದ್ದ ರೈಲ್ವೆ ಇಲಾಖೆಗೆ ಬಿಜೆಪಿ ನಾಯಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಫೇಟ್ ಪುರ್ ಸಿಕ್ರಿಯ ಬಿಜೆಪಿ ನಾಯಕ ವಿನೋದ್ ಸಮಾರಿಯಾ ಎಂಬುವವರಿಗೆ ರೈಲ್ವೆ ಇಲಾಖೆ ಬಾಕಿ ಹಣ ರು.30,68,950 ಪಾವತಿಸುವಂತೆ ನೋಟೀಸ್ ಜಾರಿ ಮಾಡಿತ್ತು. ಆದರೆ, ವಿನೋದ್ ಅವರು ಬಾಕಿ ಹಣ ಪಾವತಿಸಲು ಸಾಧ್ಯವಿಲ್ಲ. ಒಂದು ವೇಳೆ ನೀವು ನನ್ನ ಜಮೀನು ಆಸ್ತಿ ಪಾಸ್ತಿ ಹರಾಜು ಹಾಕಲು ಮುಂದಾದರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.
2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರಚಾರದ ವೇಳೆ ಪ್ರದಾನಿ ನರೇಂದ್ರ ಮೋದಿ ಅವರು ಲಖನೌನಲ್ಲಿ ರ್ಯಾಲಿ ಹಮ್ಮಿಕೊಂಡಿದ್ದರು. ಇದರಲ್ಲಿ ಭಾಗವಹಿಸುವ ಸಲುವಾಗಿ ತಮ್ಮ ಊರಿನ ಬಿಜೆಪಿ ಕಾರ್ಯಕರ್ತರನ್ನು ಲಖನೌಗೆ ಕರೆತರಲು ವಿನೋದ್ ಸಮಾರಿಯಾ ಅವರು ರೈಲಿನ 10 ಬೋಗಿಗಳನ್ನು ಬುಕ್ ಮಾಡಿದ್ದರು. ಈ ವೇಳೆ ಮುಂಗಡ ಹಣವಾಗಿ ರು.18,39,560 ಪಾವತಿಸಿದ್ದರು. ಆದರೆ, ಇನ್ನುಳಿದ ಬಾಕಿ ಹಣವನ್ನು ಪಾವತಿಸಿರಲಿಲ್ಲ. ಈ ಸಂಬಂಧ ರೈಲ್ವೆ ಇಲಾಖೆಯವರು, ವಿನೋದ್ ಅವರಿಗೆ ನೋಟೀಸ್ ನೀಡಿದ್ದು, ಬಾಕಿ ಹಣ ಒಟ್ಟು ರು.30,68,950 ಪಾವತಿಸುವಂತೆ ನೋಟೀಸ್ ನೀಡಿದೆ.
ರೈಲ್ವೆ ನೋಟೀಸ್ ನೀಡಿರುವುದರ ಬಗ್ಗೆ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ, ರಾಜ್ಯಾದ್ಯಕ್ಷ ಲಕ್ಷ್ಮೀಕಾಂತ್ ಬಜ್ ಪೈ, ಕೇಂದ್ರ ಸಚಿವ ರಮಾ ಶಂಕರ್ ಕಾತೇರಿಯಾ ಮತ್ತು ಸಂಸದ ಬಾಬುಲಾಲ್ ಅವರಿಗೆ ಪತ್ರ ಬರೆದಿದ್ದೇನೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ನನಗೆ ಯಾವುದೇ ಮಾರ್ಗವಿಲ್ಲ. ರೈಲ್ವೆ ಇಲಾಖೆ ನನ್ನ ಆಸ್ತಿ ಪಾಸ್ತಿ ಹರಾಜಿಗೆ ಹಾಕುವುದಾದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಿನೋದ್ ಹೇಳಿದ್ದಾರೆ.