ಕರ್ನಾಟಕ

ದಂಪತಿಗಳ ಭೀಕರ ಹತ್ಯೆ

Pinterest LinkedIn Tumblr

mur

ತುಮಕೂರು: ಪರಿಚಿತರೆ ದಂಪತಿಗಳನ್ನು ಹರಿತವಾದ ಆಯುಧದಿಂದ ಬರ್ಬರವಾಗಿ ತಿವಿದು ಕೊಲೆಗೈದಿರುವ ಘಟನೆ ಕಳೆದ ರಾತ್ರಿ ನಗರದಲ್ಲಿ ನಡೆದಿದೆ.

ಇಲ್ಲಿನ ಅಶೋಕ ನಗರ ೭ನೇ ಕ್ರಾಸ್ ವಾಸಿ ಧೀರಜ್ ರೈಸ್ ಮಾಲೀಕ ಗೋಪಾಲಶೆಟ್ಟಿ (೬೦), ರೂಪ (೫೦) ಎಂಬುವರೆ ಕೊಲೆಯಾಗಿರುವ ದುರ್ದೈವಿಗಳು. ಕೊಲೆಗೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಗಂಡ-ಹೆಂಡತಿ, ಮಗ ಮೂರು ಮಂದಿಯು ನಗರದ ವಿಲಾಸಿ ಕಂಫರ್ಟ್‌ಗೆ ಊಟಕ್ಕೆ ಹೋಗಿ ರಾತ್ರಿ ೧೨ ಗಂಟೆಗೆ ಮನೆಗೆ ಹಿಂತಿರುಗಿದ್ದರು. ಸ್ವಲ್ಪ ಹೊತ್ತಿನಲ್ಲಿಯೇ ಮೃತರ ಪುತ್ರ ಧೀರಜ್ ಕ್ಯಾತ್ಸಂದ್ರಕ್ಕೆ ಕಾಫಿ ಕುಡಿಯಲೆಂದು ಹೋಗಿ ೨ ಗಂಟೆಗೆ ಮನೆಗೆ ಬಂದಾಗ ತಂದೆ-ತಾಯಿ ಕೊಲೆಯಾಗಿ ಬಿದ್ದಿದ್ದರೆಂದು ಪೊಲೀಸರಿಗೆ ತಿಳಿಸಿದ್ದಾರೆ.

ರಾತ್ರಿ ೧೨ ಗಂಟೆಯಿಂದ ೨ ಗಂಟೆಯೊಳಗೆ ದಂಪತಿಗಳ ಭೀಕರ ಹತ್ಯೆ ನಡೆದಿದ್ದು, ಆರೋಪಿಯ ಬಗ್ಗೆ ಪೊಲೀಸರಿಗೆ ಮಹತ್ವದ ಮಾಹಿತಿ ದೊರೆತಿದೆ ಎನ್ನಲಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.

ಗೋಪಾಲಶೆಟ್ಟಿರವರ ಪತ್ನಿ ರೂಪಾರವರ ಮೈಮೇಲಿದ್ದ ಆಭರಣಗಳೆಲ್ಲಾ ಹಾಗೆಯೇ ಇವೆ. ಗೋಪಾಲಶೆಟ್ಟರ ಕುತ್ತಿಗೆಗೆ ಹರಿತವಾದ ಆಯುಧದಿಂದ ಇರಿದಿದ್ದಾರೆ. ಈ ಕೃತ್ಯ ನೋಡಿ ಬಿಡಿಸಿಕೊಳ್ಳಲೆಂದು ಹೋದ ಪತ್ನಿ ರೂಪಾರವರಿಗೂ ಕಿಬ್ಬೊಟ್ಟೆ ಹಾಗೂ ಭುಜಕ್ಕೆ ಇರಿದು ಕೊಲೆಗೈಯ್ಯಲಾಗಿದೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಧೀರಜ್ ೨ ಗಂಟೆಗೆ ಮನೆಗೆ ಬಂದು ನೋಡಿ ತನ್ನ ಸ್ನೇಹಿತನ ಮನೆಗೆ ತೆರಳಿ ಸ್ನೇಹಿತನಿಗೆ ಹಾಗೂ ಆತನ ಪೋಷಕರಿಗೆ ವಿಷಯ ತಿಳಿಸಿ, ಅವರ ಮುಖೇನ ತುಮಕೂರು ಹೊಸಬಡಾವಣೆ ಠಾಣೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ೩ ಗಂಟೆ ಸುಮಾರಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ತನಿಖಾ ಕಾರ್ಯ ಮುಂದುವರೆಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಬಿ. ಮಂಜುನಾಥ್, ಡಿವೈಎಸ್ಪಿ ಚಿದಾನಂದಸ್ವಾಮಿ, ಸರ್ಕಲ್ ಇನ್ಸ್‌ಪೆಕ್ಟರ್ ಬಾಳೇಗೌಡ ಮತ್ತವರ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸಹ ಘಟನಾ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಶೀಘ್ರವೇ ಆರೋಪಿಯನ್ನು ಬಂಧಿಸುವ ನಿರೀಕ್ಷೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Write A Comment