ಧಾರವಾಡ: ಜೆಎನ್ ಯು ವಿವಿ ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯಾ ಕುಮಾರ್ ಮೇಲೆ ಹೊಡೆದ ವಕೀಲರನ್ನು ಅಭಿನಂಧಿಸುವೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಅವರು ಇಂದು ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ದೆಹಲಿಯ ಜವಾಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ದೇಶದ್ರೋಹದ ಕೆಲಸ ಮಾಡಿದ್ದು ತಪ್ಪು. ಆದರೆ ಇದೀಗ 4 ರಾಜ್ಯಗಳಲ್ಲಿ ಚುನಾವಣೆಯ ದಿನಾಂಕಗಳು ಪ್ರಕಟವಾಗಿದ್ದು, ಸದ್ಯ ಅವರು ಚುನಾವಣಾ ಬ್ರ್ಯಾಂಡ್ ಆಗಿದ್ದಾರೆ. ಜೆಎನ್ ಯು ವಿವಿ ಆವರಣದಲ್ಲಿ ನಡೆದ ವಿವಾದದ ಹಿಂದೆ ಕಮ್ಯುನಿಸ್ಟ್ ಶಕ್ತಿ ಹಾಗೂ ಇಸ್ಲಾಂ ಇದೆ ಎಂದು ಅವರು ಆರೋಪಿಸಿದರು.
ಕಳೆದ ಫೆಬ್ರವರಿ ತಿಂಗಳಿನಲ್ಲಿ ದೆಹಲಿಯ ಜವಾಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಹಾಗೂ ಉಮರ್ ಖಲೀದ್, ಮತ್ತು ಅನಿರ್ಬನ್ ನೇತೃತ್ವದಲ್ಲಿ ಕಾಲೇಜಿನ ಆವರಣದಲ್ಲಿ ಉಗ್ರ ಅಫ್ಜಲ್ ಗುರು ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳು ದೇಶವಿರೋಧಿ ಘೋಷಣೆ ಹಾಗೂ ಉಗ್ರ ಅಫ್ಜಲ್ ಗುರು ಪರ ಘೋಷಣೆ ಕೂಗಿದರು ಎಂದು ಆರೋಪಿಸಿ ಕನ್ಹಯ್ಯ ಕುಮಾರ್ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು.