ಬೆಂಗಳೂರು: ಬೃಹತ್ ಸಾಲ ಮರುಪಾವತಿಸದ ಉದ್ಯಮಿ ವಿಜಯ್ ಮಲ್ಯ ಅವರಿಗೆ ಬರಬೇಕಿದ್ದ 515 ಕೋಟಿ ರುಪಾಯಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡುವಂತೆ ಸೋಮವಾರ ಸಾಲ ವಸೂಲಾತಿ ನ್ಯಾಯಾಧೀಕರಣ(ಡಿಆರ್ಟಿ) ಆದೇಶ ಹೊರಡಿಸಿದೆ.
ಯುನೈಟೆಡ್ ಸ್ಪಿರಿಟ್ಸ್ ಕಂಪೆನಿಯ ಮುಖ್ಯಸ್ಥ ಹುದ್ದೆಯಿಂದ ನಿರ್ಗಮಿಸಿದ್ದಕ್ಕಾಗಿ ಬ್ರಿಟನ್ ನ ಡೈಜಿಯೋ ಕಂಪೆನಿಯಿಂದ ವಿಜಯ್ ಮಲ್ಯಗೆ ಸಿಗುತ್ತಿರುವ 515 ಕೋಟಿ ರುಪಾಯಿ ಹಣದ ಮೊದಲ ಹಕ್ಕು ತಮ್ಮದಾಗಬೇಕು ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ ಬ್ಯಾಂಕುಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಧೀಕರಣ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.
ಇಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಜೆ.ಎಚ್, ಬೆನಕನಳ್ಳಿ ಅವರು, ಬ್ರಿಟನ್ ನ ಡೈಜಿಯೋ ಕಂಪೆನಿಯಿಂದ ವಿಜಯ್ ಮಲ್ಯಗೆ ಬರುವ 515 ಕೋಟಿ ಜಪ್ತಿ ಮಾಡುವಂತೆ ಹಾಗೂ ಹಣ ಜಪ್ತಿ ವೇಳೆ ಎಸ್ ಬಿಐಗೆ ಮೊದಲ ಆದ್ಯತೆ ನೀಡುವಂತೆ ಆದೇಶಿಸಿದೆ. ಅಲ್ಲದೆ ಹಣ ಪಡೆಯದಂತೆ ವಿಜಯ್ ಮಲ್ಯ ಅವರಿಗೆ ಸೂಚಿಸಿದೆ.
ಇದಲ್ಲದೆ ಎಸ್ ಬಿಐ ವಿಜಯ್ ಮಲ್ಯ ಅವರನ್ನು ಬಂಧಿಸಿ ಅವರ ಪಾಸ್ ಪೋರ್ಟನ್ನು ವಶಪಡಿಸಿಕೊಳ್ಳುವಂತೆ ಕೋರಿದ್ದ ಅರ್ಜಿ ಸೇರಿದಂತೆ ಇತರೆ ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಕರಣ ಮಾರ್ಚ್ 28ಕ್ಕೆ ಮುಂದೂಡಿದೆ.