ಶಿವಮೊಗ್ಗ, ಜ.15-ಸಮಾಜ ಕಲ್ಯಾಣ ಇಲಾಖೆಯಲ್ಲಿ ಬಹಳಷ್ಟು ಅವ್ಯವಹಾರಗಳು ನಡೆದಿದೆ. ಇಲಾಖೆಯ ಸಚಿವ ಎಚ್. ಆಂಜನೇಯ ವಿರುದ್ಧ ಹಲವಾರು ಆರೋಪ ಗಳಿದ್ದು ಅವರಿಂದ ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಪಡೆಯ ಬೇಕೆಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್. ಆಂಜನೇಯ ಅವರ ಮೇಲೆ ಹಲ ವಾರು ಆರೋಪಗಳಿರುವುದರಿಂದ ಅವರಿಂದ ರಾಜೀನಾಮೆ ಪಡೆದು ಸಮಾಜ ಕಲ್ಯಾಣ ಇಲಾಖೆಗೆ ಸಮರ್ಥರನ್ನು ಹಾಕಬೇಕೆಂದು ಒತ್ತಾಯಿಸಿದರು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಶೇ.40ರಷ್ಟು ಅನುದಾನ ದುರ್ಬಳಕೆ ಯಾಗಿದೆ.
ಕೂಡಲೇ ಈ ಇಲಾಖೆಗೆ ಸಮರ್ಥರನ್ನು ಸಚಿವರನ್ನಾಗಿಸದೆ ಹೋದರೆ, ಮುಖ್ಯಮಮತ್ರಿಗಳಿಗೆ ಬೊಗಳೆ ಸಿಎಂ ಎಂಬ ಕೆಟ್ಟ ಹೆಸರು ಬರುತ್ತದೆ. ಬೇಗ ಎಚ್ಚೆತ್ತುಕೊಳ್ಳಲಿ ಎಂದು ಕಿವಿಮಾತು ಹೇಳಿದರು. ಭದ್ರ ಎಡದಂಡೆ, ಬಲದಂಡೆ ನಾಲೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಇಂಜಿನಿಯರುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಕಾಮಗಾರಿಗೆ ಮರು ಟೆಂಡರ್ ಕರೆಯ ಬೇಕು. ರೈತರ ಅನುಕೂಲಕ್ಕಾಗಿ ನಾಲೆಗಳಲ್ಲಿ ನೀರು ಹರಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.