ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸಂಪುಟದ ಐವರು ಸಚಿವರು ಭಾರೀ ಭೂ ಹಗರಣಗಳಲ್ಲಿ ಶಾಮಿಲಾಗಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿರುವ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ್ ಅವರು ಈ ಕುರಿತು ಕೂಡಲೇ ಉನ್ನತ ಮಟ್ಟದ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಸಿದ್ದರಾಮಯ್ಯ ಸೇರಿದಂತೆ ಸಚಿವರಾದ ಟಿ.ಬಿ.ಜಯಚಂದ್ರ ,ಕೆ.ಜೆ.ಜಾರ್ಜ್,ಡಿ.ಕೆ.ಶಿವಕುಮಾರ್ ಮತ್ತು ದಿನೇಶ್ ಗುಂಡು ರಾವ್ ಅವರು ಭೂ ಹಗರಣಗಳಲ್ಲಿ ಶಾಮಿಲಾಗಿದ್ದಾರೆ ಎಂದು ಹಿರೇಮಠ್ ಆರೋಪಿಸಿದ್ದಾರೆ.
ನಾನು ಭೂಹಗರಣದ ಕುರಿತಾಗಿ ಸರ್ಕಾರದ ಗಮನ ಸೆಳೆದರೂ ಸರ್ಕಾರ ಈ ಕುರಿತಾಗಿ ತನಿಖೆ ನಡೆಸುತ್ತಿಲ್ಲ . ಮಾಜಿ ಗೃಹ ಸಚಿವ ,ಹಾಲಿ ಬೆಂಗಳೂರು ನಗರ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಅವರ ಒಡೆತನದ ಕಂಪೆನಿ ಮೂಲಕ ಬೆಂಗಳೂರು ನಗರದಲ್ಲಿ ಭಾರೀ ಭೂ ಅವ್ಯಹಾರ ನಡೆದಿದೆ ಎಂದು ಆರೋಪಿಸಿದರು.
ಈ ಬಗ್ಗೆ ಸೂಕ್ತ ದಾಖಲೆಗಳನ್ನು ಒದಗಿಸಿ ಭೃಷ್ಟ ಸರ್ಕಾರದ ವಿರುದ್ದ ಹೋರಾಟ ನಡೆಸುವುದಾಗಿ ಹಿರೇಮಠ್ ಹೇಳಿದ್ದಾರೆ.
-ಉದಯವಾಣಿ