
ನವದೆಹಲಿ: ತಮಿಳ್ನಾಡು ಮತ್ತು ಚೆನ್ನೈನಲ್ಲಿ ಜಲಪ್ರಳಯದಿಂದಾಗಿ ನಾಶ ನಷ್ಟ ಸಂಭವಿಸಿರುವ ಬಗ್ಗೆ ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ, ಬ್ಯಾಂಕುಗಳು ಅಲ್ಲಿನ ಜನರಿಗೆ ನೆರವು ನೀಡಬೇಕೆಂದು ವಿನಂತಿಸಿದ್ದಾರೆ.
ಚೆನ್ನೈನಲ್ಲಿರುವ ಸಂತ್ರಸ್ತರಿಗೆ ಸಾಲ ಮತ್ತು ಆರ್ಥಿಕ ಸಹಾಯವನ್ನು ವಿತರಿಸಿದ ಜೇಟ್ಲಿ, ತಮುಳ್ನಾಡು ಪ್ರಕೃತಿ ವಿಕೋಪಕ್ಕೆ ತುತ್ತಾಗಿದೆ. ಕಳೆದ ಕೆಲವು ವಾರಗಳ ಹಿಂದೆ ಇಲ್ಲಿ ಯಾವ ರೀತಿ ಪ್ರಕೃತಿ ಮುನಿಸಿಕೊಂಡಿತ್ತು ಎಂಬುದನ್ನು ನಾವು ನೋಡಿದ್ದೇವೆ. ಈ ಜಲಪ್ರಳಯದಿಂದಾಗಿ ಮನುಷ್ಯನಿಗೆ ತುಂಬಲಾರದಂಥಾ ನಷ್ಟವುಂಟಾಗಿದೆ. ಇದೀಗ ನಾವು ತುರ್ತು ಸಂದರ್ಭಗಳಲ್ಲಿ ಸಂತ್ರಸ್ತರಿಗೆ ಸಾಂತ್ವನ, ರಕ್ಷಣೆ ಮತ್ತು ಅಗತ್ಯ ವಸ್ತುಗಳ ಪೂರೈಕೆಯನ್ನು ಮಾಡಬೇಕಾಗಿದೆ. ಆದಾಗ್ಯೂ, ಪ್ರಕೃತಿ ವಿಕೋಪಗಳನ್ನು ನಮ್ಮಿಂದ ತಡೆಯಲು ಸಾಧ್ಯಲಿಲ್ಲ, ಆದರೆ ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
ಜಲಪ್ರಳಯದಲ್ಲಿ ಮನೆ ಮಠ ಕಳೆದುಕೊಂಡವರಿಗೆ ಅದನ್ನು ಪುನನಿರ್ಮಿಸಲು ಸರ್ಕಾರ ಸಹಾಯ ಮಾಡುತ್ತದೆ. ಏತನ್ಮಧ್ಯೆ, ತಮ್ಮನ್ನು ತಾವೇ ಸುಧಾರಿಸಿಕೊಳ್ಳಲು ಇಲ್ಲಿನ ಜನರಿಗೆ ತುಂಬಾ ಸಮಯ ಬೇಕಾಗುತ್ತದೆ. ಅದಕ್ಕಾಗಿ ಸರ್ಕಾರ ಆರ್ಥಿಕ ಸಹಾಯವನ್ನೂ ನೀಡುತ್ತದೆಂದು ಜೇಟ್ಲಿ ಹೇಳಿದ್ದಾರೆ.