ಬೆಂಗಳೂರು: ರೆಸಿಡೆನ್ಸಿ ರಸ್ತೆಯಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಯುವಕರೊಂದಿಗೆ ಯುವತಿ ನಿಂತಿದ್ದನ್ನು ಪ್ರಶ್ನಿಸಿ `ಮನೆಗೆ ಹೋಗಿ’ ಎಂದು ಬುದ್ಧಿವಾದ ಹೇಳಿದ ಅಶೋಕ ನಗರ ಠಾಣೆ ಎಎಸ್ಸೈ ವಿರುದ್ಧವೇ ಯುವತಿಯೊಬ್ಬರು ನಿಂದನೆ ಆರೋಪ ಮಾಡಿ ಟ್ವೀಟ್ ಮಾಡಿದ್ದಾರೆ.
ಯುವತಿ ಟ್ವೀಟ್ ಆಧಾರಿಸಿ ತನಿಖೆ ನಡೆಸುವಂತೆ ಕಬ್ಬನ್ ಪಾರ್ಕ್ ಎಸಿಪಿ ಅವರಿಗೆ ಕೇಂದ್ರ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ ಆದೇಶಿಸಿದ್ದಾರೆ. ಕೇರಳ ಮೂಲದ ಯುವತಿ ರಂಜನಾ ಮೆನನ್, ಮಹಾರಾಷ್ಟ್ರ ಮೂಲದ ಸಂಶೋಧನಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ರೆಸಿಡೆನ್ಸಿ ರಸ್ತೆಯಲ್ಲಿ ಶಾಪಿಂಗ್ಗೆ ಹೋಗಿ ವಾಪಸ್ ಮನೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹೀಗಾಗಿ, ಬೆಂಗಳೂರು ನಗರ ಪೊಲೀಸ್ ಟ್ವೀಟರ್ ಅಕೌಂಟ್ ಉದ್ದೇಶಿಸಿ ಸರಣಿ ಟ್ವೀಟ್ ಮಾಡಿದ್ದಾರೆ.
`ಮಹಿಳೆಯರಿಗೆ ಬೆಂಗಳೂರಿನಲ್ಲಿ ಸುರಕ್ಷತೆ ಇಲ್ಲ. ಕ್ಯಾಬ್ಗಾಗಿ ರೆಸಿಡೆನ್ಸಿ ರಸ್ತೆಯಲ್ಲಿ ಕಾಯುತ್ತ ನಿಂತಿದ್ದಾಗ ಪೊಲೀಸ್ ಸಿಬ್ಬಂದಿ ವೆಂಕಟೇಶ್ ಗೌಡ ಎಂಬುವರು ನಿಂದಿಸಿದ್ದಾರೆ. ಮಹಿಳೆ ಸುರಕ್ಷತೆ ಬಗ್ಗೆ ತುಂಬಾ ಮಾತನಾಡಲಾಗುತ್ತದೆ. ಆದರೆ, ಕಟ್ಟಡವೊಂದರ ಗೇಟ್ ವೊಳಗೆ ಕ್ಯಾಬ್ಗಾಗಿ ಕಾಯುತ್ತಾ ನಿಂತಾಗ ವೆಂಕಟೇಶ ನಿಂದಿಸಿದ್ದಾರೆ. ತಡರಾತ್ರಿಯಲ್ಲಿ ಆಟೋ ಅಥವಾ ಕ್ಯಾಬ್ ಇಲ್ಲದೇ ನಾವು ರಸ್ತೆಗೆ ಹೋಗುವಂತೆ ಮಾಡಿದ್ದಾರೆ’ ಎಂದು ರಂಜನಾ ಮೆನನ್ ಆರೋಪಿಸಿದ್ದಾರೆ. ಟ್ವೀಟರ್ ದೂರನ್ನು ಗಂಬಿsೀರವಾಗಿ ಪರಿಗಣಿಸಿದ ಡಿಸಿಪಿ ಸಂದೀಪ್ ಪಾಟೀಲ್, ಕಬ್ಬನ್ಪಾರ್ಕ್ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದಾರೆ.
ಆಗಿದ್ದೇನು?: ಶುಕ್ರವಾರ ರಾತ್ರಿ 2 ಗಂಟೆ ಸುಮಾರಿಗೆ ಅಶೋಕ ನಗರ ಠಾಣೆ ವ್ಯಾಪ್ತಿಯ ರೆಸಿಡೆನ್ಸಿ ರಸ್ತೆಯಲ್ಲಿ ರಂಜನಾ ಅವರು ಇಬ್ಬರು ಯುವಕರೊಂದಿಗೆ ರಸ್ತೆಬದಿ ನಿಂತಿದ್ದರು. ಈ ವೇಳೆ ಹೊಯ್ಸಳ ವಾಹನದಲ್ಲಿ ಗಸ್ತಿನಲ್ಲಿದ್ದ ಅಶೋಕ ನಗರ ಠಾಣೆ ಎಎಸ್ಸೈ ವೆಂಕಟೇಶಗೌಡ ಹಾಗೂ ಸಿಬ್ಬಂದಿ ಇವರು ನಿಂತಿರುವುದನ್ನು ಗಮನಿಸಿದ್ದರು. ಅವರು ಅಲ್ಲಿಂದ ಹೊರಟು ಹೋಗಬಹುದು ಎಂದು ಭಾವಿಸಿ ತಮ್ಮ ಗಸ್ತು ಮುಂದುವರಿಸಿದ್ದರು. ಆದರೆ, ಸುಮಾರು 45 ನಿಮಿಷಗಳ ಬಳಿಕ ಪೊಲೀಸರು ಮತ್ತದೆ ಸ್ಥಳಕ್ಕೆ ಬಂದಾಗ ಯುವತಿ ಹಾಗೂ ಯುವಕರು ಅದೇ ಜಾಗದಲ್ಲೇ ಇದ್ದರು. ಸುರಕ್ಷತೆ ದೃಷ್ಟಿಯಿಂದ ಹಾಗೂ ತಡರಾತ್ರಿ ಈ ರೀತಿ ಹೆಣ್ಣು ಮಕ್ಕಳು ನಿಂತಿರುವುದನ್ನು ಎಎಸ್ಸೈ ಅವರು ರಂಜನಾ ಅವರನ್ನು ಪ್ರಶ್ನಿಸಿದ್ದಾರೆ.
ಆಗ, ರಂಜನಾ ಹಾಗೂ ಜತೆಗಿದ್ದವರು ಕ್ಯಾಬ್ಗಾಗಿ ಕಾಯುತ್ತಿರುವು ದಾಗಿ ಹೇಳಿದರು. ತುಂಬಾ ಹೊತ್ತಿನಿಂದ ಇಲ್ಲೇ ನಿಂತಿದ್ದಿರಾ. ರಾತ್ರಿ ತಡವಾಗಿರುವುದರಿಂದ ಕ್ಯಾಬ್ ಇಲ್ಲದಿದ್ದರೆ ಆಟೋದಲ್ಲೇ ಹೊರಟು ಹೋಗಿ ಎಂದು ಎಎಸ್ಸೈ ವೆಂಕಟೇಶ್ ಅವರು ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ. ವೆಂಕಟೇಶ್ ಅವರನ್ನು ಕರೆಸಿ ವಿಚಾರಣೆ ನಡೆಸಲಾಗುತ್ತದೆ. ಬಳಿಕ ಆರೋಪ ಮಾಡಿರುವ ಮಹಿಳೆಯನ್ನು ವಿಚಾರಣೆ ನಡೆಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.