ಕುಣಿಗಲ್, ನ.28- ಪ್ರೀತಿಸಿ ಕೈ ಹಿಡಿದವನೇ ಮನೆಯವರ ಜೊತೆ ಸೇರಿ ಪತ್ನಿಯ ಕತ್ತು ಹಿಸುಕಿ ಕೊಂದು ಪರಾರಿಯಾಗಿರುವ ಘಟನೆ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹುತ್ರಿದುರ್ಗ ಹೋಬಳಿ ಈಡಿಗರಪಾಳ್ಯ ವಾಸಿ ಮೈತ್ರಿ(28) ಪ್ರೀತಿಸಿ ಮದುವೆಯಾದ ಗಂಡನಿಂದಲೇ ಹತ್ಯೆಗೀಡಾದ ನತದೃಷ್ಟೆ. ಕಳೆದ ಎಂಟು ವರ್ಷಗಳ ಹಿಂದೆ ಟ್ಯಾಕ್ಸಿ ಚಾಲಕ ರಾಮಚಂದ್ರ ಪಟ್ಟಣದವಳೇ ಆದ ಮೈತ್ರಿಯನ್ನು ಪ್ರೀತಿಸಿ ವಿವಾಹವಾಗಿದ್ದು,ದಂಪತಿಗೆ ಮೂರು ವರ್ಷದ ಮಗಳು ಇದ್ದಾಳೆ. ಕಳೆದ ಎರಡು ವರ್ಷಗಳಿಂದ ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ವೈಮನಸ್ಸು ಮೂಡಿದ್ದು, ರಾಮಚಂದ್ರ ಪತ್ನಿಯ ನಡತೆ ಬಗ್ಗೆ ಅನುಮಾನಗೊಂಡಿದ್ದ ಎನ್ನಲಾಗಿದೆ.
ರಾಮಚಂದ್ರನ ತಾಯಿ ಹಾಗೂ ಅಣ್ಣ , ಅತ್ತಿಗೆ ಅವರುಗಳು ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ ಗಂಡ ಹಾಗೂ ಮನೆಯವರು ಮೈತ್ರಿಯನ್ನು ಮನೆಯ ಹಿಂದಿರುವ ಹೊಲಕ್ಕೆ ಎಳೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿ ಮಗುವಿನೊಂದಿಗೆ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ 9 ಗಂಟೆಯಾದರೂ ಮನೆ ಬಾಗಿಲು ತೆರೆಯದ್ದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಅನುಮಾನಗೊಂಡು ಬಂದು ನೋಡಿದಾಗ ಹೊಲದಲ್ಲಿ ಮೈತ್ರಿ ಶವ ಕಂಡಿದೆ. ಕೂಡಲೇ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸಿಪಿಐ ಧರ್ಮೇಂದ್ರ, ಪಿಎಸ್ಐ ಗುರುಪ್ರಸಾದ್ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಗಂಡ ಹಾಗೂ ಮನೆಯವರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.