ಕರವೇ ಕರ್ನಾಟಕ ರಾಜ್ಯೋತ್ಸವ ಬೆಂಗಳೂರು, ನ.28: ಐಟಿ ಬಿಟಿ ಕ್ಷೇತ್ರ ಸೇರಿದಂತೆ ಯಾವುದೇ ಉನ್ನತ ಉದ್ಯೋಗವನ್ನು ನಿರ್ವಹಿಸುತ್ತಿದ್ದರೂ ಕನ್ನಡ ನಾಡು-ನುಡಿಯನ್ನು ಮರೆಯಬಾರದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಹೇಳಿದ್ದಾರೆ.
ಶನಿವಾರ ನಗರದ ಯವನಿಕ ಸಭಾಂಗಣದಲ್ಲಿ ಟಿ.ಎ. ನಾರಾಯಣಗೌಡ ಅವರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಐಟಿ ವಿಭಾಗ ಆಯೋಜಿಸಿದ್ದ 2ನೆ ವರ್ಷದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರ ಹಾಗೂ ಇನ್ನಾವುದೇ ಉನ್ನತ ಉದ್ಯೋಗದಲ್ಲಿದ್ದರೂ ಎಂದೆಂದಿಗೂ ಕನ್ನಡತನವನ್ನು ಮರೆಯಬಾರದು ಎಂದು ತಿಳಿ ಹೇಳಿದರು.
ಇತ್ತಿಚೀನ ದಿನಗಳಲ್ಲಿ ಐಟಿ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸ್ವಾಗತಾರ್ಹ. ಮಂಡ್ಯ ಕನ್ನಡ, ಹುಬ್ಬಳ್ಳಿ ಕನ್ನಡ, ಹಾಸನ ಕನ್ನಡ ಎಂದು ಗುರುತಿಸುವ ರೀತಿಯಲ್ಲೇ ಐಟಿ ಕನ್ನಡವೆಂದು ಗುರುತಿಸಲಾಗುತ್ತಿದೆ. ಈ ಮಟ್ಟಿಗೆ ಕನ್ನಡ ಭಾಷೆಗೆ ಪ್ರಾಶಸ್ತ್ಯ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.
ವಿಶ್ವದ ಪ್ರಸಿದ್ಧ ಐಟಿ ಸಂಸ್ಥೆಗಳು ನಗರದಲ್ಲಿ ನೆಲಸಿವೆ. ಆದರೆ ಐಟಿ ಕ್ಷೇತ್ರವು ಸ್ಥಳೀಯ ಕನ್ನಡದ ನಿರುದ್ಯೋಗಿ ಯುವಕರಿಗೆ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗವನ್ನು ಕಲ್ಪಿಸಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕನ್ನಡಿಗರಿಗೆ ಉದ್ಯೋಗವನ್ನು ನೀಡಬೇಕು ಎಂದು ಮನವಿ ಮಾಡಿದ ಅವರು, ಕನ್ನಡಿಗರು ಈ ಕ್ಷೇತ್ರದಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳಲು ಮುಂದಾಗಬೇಕೆಂದು ಕಿವಿಮಾತು ಹೇಳಿದರು.
ಕನ್ನಡ ಭಾಷೆ, ಕಲೆ, ಸಂಸ್ಕೃತಿ ಉಳಿಸುವಂತ ಕಾರ್ಯಕ್ರಮಗಳು ಹೆಚ್ಚಾಗಿ ರೂಪಿಸುವ ಅಗತ್ಯತೆಯಿದ್ದು, ಈ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಕಾರ್ಯ ಪ್ರವೃತ್ತವಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿವಿಯ ನಿವೃತ್ತ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ, ಉದ್ಯಮಿ ಉದಯ್ ಗರುಡಾಚಾರ್, ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಉಪಸ್ಥಿತರಿದ್ದರು.