ಬೆಂಗಳೂರು: ಅಸಹಿಷ್ಣುತೆ ಬಗ್ಗೆ ಬಾಲಿವುಡ್ ನಟ ಅಮೀರ್ ಖಾನ್ ಅವರ ಹೇಳಿಕೆ ಕುರಿತಂತೆ ದಕ್ಷಿಣ ಭಾರತದ ಖ್ಯಾತ ನಟ ಉಪೇಂದ್ರ ಅವರು ವಿಷಾಧ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಉಪೇಂದ್ರ, ದೇಶ ಬಿಟ್ಟು ಹೋಗುವುದು ಹೇಡಿತನ. ದೇಶದಲ್ಲಿ ಅಸಹಿಷ್ಣುತೆ ಇದೆ ಎಂದಾದರೇ ಓರ್ವ ನಾಯಕನಾಗಿ ನೀವು ಅದನ್ನು ಎದುರಿಸಬೇಕು ಮತ್ತು ಹೋರಾಡಬೇಕು ಎಂದು ಹೇಳಿದ್ದಾರೆ.
“ಪ್ರೀತಿಯ ಅಮೀರ್ ಖಾನ್, ನಾನು ಇಷ್ಟಪಡುವ ಕೆಲವು ನಾಯಕರಲ್ಲಿ ನೀವು ಕೂಡ ಒಬ್ಬರು. ನೀವು ನಾನು ಆರಾಧಿಸುತ್ತಿದ್ದ ನೆಚ್ಚಿನ ನಟರಲ್ಲಿ ಒಬ್ಬರು. ದೇಶದಲ್ಲಿ ಅಸಹಿಷ್ಣುತೆ ಇದ್ದರೆ ಓರ್ವ ನಾಯಕನಾಗಿ ನೀವು ಅದರ ವಿರುದ್ಧ ಧನಿ ಎತ್ತಬೇಕು ಮತ್ತು ಅದರ ವಿರುದ್ಧ ಎದ್ದು ನಿಂತು ಹೋರಾಡಬೇಕು. ನೀವೇನಾದರೂ ಅದರಿಂದ ಪಲಾಯನ ಮಾಡಲು ಯತ್ನಿಸಿದರೆ ಹೇಡಿ ಅನ್ನೋ ಪಟ್ಟ ಕಟ್ಟಿಕೊಳ್ಳಬೇಕಾಗುತ್ತದೆ. ಚಿಂತೆ ಬೇಡ ಅಮೀರ್ ಖಾನ್ ಹಾಗೂ ಶಾರುಖ್ ಖಾನ್ ನಿಮ್ಮ ಮುಂದಿನ ಚಿತ್ರ ಖಂಡಿತಾ ಸೂಪರ್ ಹಿಟ್ ಆಗುತ್ತದೆ. ಭಾರತೀಯರು ತಾವೆಷ್ಟು ಸಹಿಷ್ಣುಗಳು ಅನ್ನೋದನ್ನ ಸಾಬೀತು ಮಾಡುತ್ತಾರೆ. ಇದು ನಿಮಗೂ ಚೆನ್ನಾಗಿ ಗೊತ್ತಿದೆ. ಹೇಳಲು ವಿಷಾಧವಾಗುತ್ತಿದೆ. ಇಂತಹ ಮಾತುಗಳಿಂದ ನೀವು ಇದೀಗ ನನ್ನ ಮತ್ತು ನನ್ನಂತ ಹಲವಾರು ಅಭಿಮಾನಿಗಳ ನೆಚ್ಚಿನ ನಾಯಕನಾಗಿ ಉಳಿದಿಲ್ಲ” ಎಂದು ನಟ ಉಪೇಂದ್ರ ತಮ್ಮ ಅಭಿಪ್ರಾಯಹಂಚಿಕೊಂಡಿದ್ದಾರೆ.
ಒಟ್ಟಾರೆ ಅಮೀರ್ ಖಾನ್ ಅವರ ಅಸಹಿಷ್ಣುತೆ ಕುರಿತ ಹೇಳಿಕೆ ಇದೀಗ ದೇಶಾದ್ಯಂತ ಭಾರಿ ಚರ್ಚೆಗೆ ಗುರಿಯಾಗಿದ್ದು, ಪರ-ವಿರೋಧ ಅಭಿಪ್ರಾಯಗಳು ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.