ಬೆಂಗಳೂರು, ನ.24: ಉತ್ತರ ಕರ್ನಾಟಕದ ಸಂಸದರು, ಶಾಸಕರು ಹಾಗೂ ಸಚಿವರಿಗೆ ಮಹದಾಯಿ ಯೋಜನೆ ಜಾರಿಯಾಗಬೇಕೆಂಬ ಇಚ್ಛೆ ಇದ್ದರೆ, ಈ ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಿ ಎಂದು ಕರ್ನಾಟಕ ಚಲಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಸಲಹೆ ನೀಡಿದ್ದಾರೆ.
ರೈತಸೇನಾ ಹಾಗೂ ಮಹದಾಯಿ-ಕಳಸಾಬಂಡೂರಿ ಹೋರಾಟ ಸಮನ್ವಯ ಸಮಿತಿ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಕಳಸಾ ಬಂಡೂರಿ ಯೋಜನೆಗೆ ಆಗ್ರಹಿಸಿ ನಡೆಸುತ್ತಿರುವ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮಹದಾಯಿ ಯೋಜನೆ ಜಾರಿಯಾಗಬೇಕಾದರೆ ಪ್ರಧಾನಿ ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಸರಕಾರಗಳ ಮುಖ್ಯಮಂತ್ರಿಗಳನ್ನು ಕರೆಸಿ ಮಹದಾಯಿ ಯೋಜನೆ ಜಾರಿಗೆ ಇರುವ ಲೋಪದೋಷಗಳನ್ನು ಬಗೆ ಹರಿಸಬಹುದು. ಆದರೂ ಪ್ರಧಾನಿ ಈ ಕುರಿತು ಮೀನಮೇಷ ಎಣಿಸುತ್ತಿದ್ದಾರೆ. ಹಾಗಾಗಿ ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಹೋರಾಟಕ್ಕಿಳಿಯಬೇಕೆಂದು ಸಾ.ರಾ.ಗೋವಿಂದ್ ಹೇಳಿದರು. ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದ ಪರಿಣಾಮ ರೈತರು ಎಂದೂ ಕಂಡಿರದ ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದರಿಂದ ರೈತರ ಕುಟುಂಬ ಬೀದಿಗೆ ಬಿದ್ದು ಭಿಕ್ಷೆ ಬೇಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟಾಗಿಯೂ ಜನಪ್ರತಿನಿಧಿಗಳು ಮಹದಾಯಿ ಯೋಜನೆ ಕುರಿತು ಗಂಭೀರವಾಗಿ ಚಿಂತಿಸುತ್ತಿಲ್ಲ. ಕೇವಲ ತಮ್ಮ ರಾಜಕೀಯ ದುರುದ್ದೇಶಗಳನ್ನಿಟ್ಟುಕೊಟ್ಟು ಅಸಂಬದ್ಧ ಹೇಳಿಕೆಗಳನ್ನು ಕೊಡುತ್ತಿದ್ದಾರೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ರೈತ ಸೇನಾ ಸಂಘಟನೆಯ ರಾಜ್ಯಾಧ್ಯಕ್ಷ ವಿರೇಶ್ ಸೊವರದಮಠ ಮಾತನಾಡಿ, ರಾಜ್ಯದಲ್ಲಿ ಬರಗಾಲ ತೀವ್ರವಾಗಿ ಕಾಡುತ್ತಿದ್ದು, ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಳೆಯಿಲ್ಲದೆ ಬೆಳೆ ನಷ್ಟವನ್ನು ಅನುಭವಿಸುತ್ತಿರುವ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಾಗಾಗಿ ರೈತರ ಆತ್ಮಹತ್ಯೆಯನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಮಹದಾಯಿ ಯೋಜನೆೆ ಅನುಷ್ಠಾನಕ್ಕೆ ಆಗ್ರಹಿಸುತ್ತಿರುವುದಾಗಿ ತಿಳಿಸಿದರು.ಮಹದಾಯಿ ಯೋಜನೆಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟ ಇಂದಿಗೆ 125 ದಿನ ಕಳೆದಿದೆ. ರೈತರು ತಮ್ಮ ಆರ್ಥಿಕ ಸಂಕಷ್ಟದ ನಡೆವೆಯೂ ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ, ಸರಕಾರ ಹಾಗೂ ಎಲ್ಲ ಪಕ್ಷಗಳ ಪ್ರತಿನಿಧಿಗಳು ರೈತರ ತಾಳ್ಮೆಯನ್ನು ಈ ಮಟ್ಟಕ್ಕೆ ಪರೀಕ್ಷಿಸಬಾರದೆಂದು ಅವರು ಎಚ್ಚರಿಕೆ ನೀಡಿದರು. ಮಹದಾಯಿ ಯೋಜನೆಗೆ ಆಗ್ರಹಿಸಿ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿದ್ದ ಹೋರಾಟ ರಾಜಧಾನಿ ಬೆಂಗಳೂರಿಗೆ ವರ್ಗಾವಣೆಯಾಗಿದೆ. ಸರಕಾರ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟವಾದ ತೀರ್ಮಾನ ಕೈಗೊಳ್ಳುವವರೆಗೂ ಸ್ವಾತಂತ್ರ ಉದ್ಯಾನವನದಿಂದ ರೈತರು ಕದಲುವುದಿಲ್ಲವೆಂದು ಅವರು ತಿಳಿಸಿದರು.
ಪ್ರತಿಭಟನೆಯಲ್ಲಿ ಧಾರವಾಡದ ರೇವಣ ಸಿದ್ದೇಶ್ವರ ಮಠದ ಬಸವರಾಜದೇವರು, ಅಲ್ಲಮಪ್ರಭು ಯೋಗ ಪೀಠದ ಬಸವಕುಮಾರ್ ಸ್ವಾಮೀಜಿ, ಜಯ ಕರ್ನಾಟಕ ಸಂಘಟನೆಯ ಮುಖಂಡ ಜಗದೀಶ್, ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರ ಅಂಬಲಿ ಮತ್ತಿತರರು ಉಪಸ್ಥಿತರಿದ್ದರು.