ಹಾಸನ,ನ.23-ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಪೇದೆಯೊಬ್ಬನ ಮೇಲೆ ಆನೆ ದಾಳಿ ನಡೆಸಿರುವ ಘಟನೆ ನಿನ್ನೆ ರಾತ್ರಿ ಯಶಲೂರು ವ್ಯಾಪ್ತಿಯಲ್ಲಿ ನಡೆದಿದೆ. ಅಲ್ತಾಫ್(36) ಆನೆ ದಾಳಿಯಿಂದ ಗಾಯಗೊಂಡಿರುವ ಪೇದೆ. ಈತ ಆಲೂರಿನ ಕೆರೋಡಿಯಲ್ಲಿ ಕೆಲಸ ಮುಗಿಸಿ ರಾತ್ರಿ ರಾಯನ ಕೊಪ್ಪಲಿಗೆ ತೆರಳುತ್ತಿದ್ದ ವೇಳೆ ಯಶಲೂರು ವ್ಯಾಪ್ತಿಯ ಅರಣ್ಯ ಪ್ರದೇಶವಿರುವ ಕೆರೋಡಿ ಬಳಿ ಆನೆ ಏಕಾಏಕಿ ಕಾಣಿಸಿಕೊಂಡು ದಾಳಿ ನಡೆಸಿದೆ.
ದಾಳಿ ವೇಳೆ ಕೈಗೆ ತೀವ್ರ ಪೆಟ್ಟಾಗಿ ಪ್ರಜ್ಞೆ ತಪ್ಪಿದ್ದ ಅಲ್ತಾಫ್ನನ್ನು ಅಲ್ಲಿಯೇ ಬಿಟ್ಟು ಆನೆ ಮರಳಿದೆ. ಈತನನ್ನು ಕಂಡ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಲೂರು, ಸಕಲೇಶಪುರ, ಬಾಳಪೇಟೆ ಪ್ರದೇಶದಲ್ಲಿ ಇತ್ತೀಚೆಗೆ ಆನೆಗಳ ಉಪಟಳ ಹೆಚ್ಚಿದ್ದು ಬೆಳೆ ಹಾನಿ ಸೇರಿದಂತೆ ಇಂತಹ ಸಣ್ಣಪುಟ್ಟ ಘಟನೆಗಳು ಮರುಕಳಿಸುತ್ತಿರುವುದು ವಿಪರ್ಯಾಸ.