ಚಿಕ್ಕನಾಯಕನಹಳ್ಳಿ, ನ.22- ಆಯತಪ್ಪಿ ಬಾವಿಗೆ ಬಿದ್ದಿದ್ದ ಮಹಿಳೆಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಸಹಕಾರದಲ್ಲಿ ರಕ್ಷಿಸಿದ ಘಟನೆ ತಾಲೂಕಿನ ಕಸಬಾ ಹೋಬಳಿ ನವಿಲೆಯಲ್ಲಿ ನಡೆದಿದೆ.
ನವಿಲೆ ಗ್ರಾಮದ ರಸ್ತೆ ಬದಿಯ 50 ಅಡಿ ಆಳದ ನೀರು ತುಂಬಿದ ಕಲು ಬಾವಿಗೆ ಯಶೋಧಮ್ಮ (50) ಆಯತಪ್ಪಿ ಬಿದ್ದಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಆರಂಭದಲ್ಲಿ ಹಗ್ಗ ಬಿಟ್ಟು ಮಹಿಳೆ ಮುಳುಗದಂತೆ ನೋಡಿ ಕೊಂಡಿದ್ದರು. ನಂತರ ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿ ಕರೆಸಿ ಸಿಬ್ಬಂದಿ ಸಹಾಯದಿಂದ ಮಹಿಳೆಯನ್ನು ರಕ್ಷಿಸಿದ್ದಾರೆ. ಠಾಣೆ ಸಿಬ್ಬಂದಿ ಏಣಿ ಹಾಗೂ ಹಗ್ಗ ಬಳಸಿ ಬಾವಿಗೆ ಇಳಿದು ಮಹಿಳೆಯನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು.
ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಪಂಚಾಕ್ಷರಿ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಲಾಯಿತು. ಸಿಬ್ಬಂದಿ ರಾಜಣ್ಣ, ನಾಗರಾಜು, ರಘುನಾಥ್ರಾಜ್ ಅರಸ್ ಹಾಗೂ ಚಿದಾನಂದ್ ಕಾರ್ಯಾಚರಣೆಯಲ್ಲಿದ್ದರು.