ತಿಪಟೂರು, ನ.21- ಕಳೆದೆರಡು ವರ್ಷಗಳಿಂದ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಯುವಕನ ಮನೆ ಮುಂದೆ ಯುವತಿ ಹಾಗೂ ಕುಟುಂಬದ ಸದಸ್ಯರು ಧರಣಿ ನಡೆಸುತ್ತಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದ ಯಶವಂತ್ (27) ಎಂಬ ಯುವಕ ತುರುವೇಕೆರೆಯಲ್ಲಿ ಸೈಬರ್ ಸೆಂಟರ್ ನಡೆಸುತ್ತಿದ್ದಾಗ ತುರುವೇಕೆರೆ ತಾಲ್ಲೂಕಿನ ಅರಳಿಕೆರೆ ಗ್ರಾಮದ ವಾಣಿ (19) (ಹೆಸರು ಬದಲಾಗಿಸಲಾಗಿದೆ) ಸೈಬರ್ ಸೆಂಟರ್ಗೆ ಬರುತ್ತಿದ್ದು, ಅಲ್ಲಿ ಪರಿಚಯವಾಗಿ ಪರಿಚಯ ಸ್ನೇಹ ಪ್ರೀತಿಗೆ ತಿರುಗಿತ್ತು ಎಂದು ಧರಣಿ ನಡೆಸುತ್ತಿರುವ ಯುವತಿ ಹಾಗೂ ತಂದೆ-ತಾಯಿ ತಿಳಿಸಿದ್ದಾರೆ.
ಈ ನಡುವೆ ವಾಣಿನ್ನು ಮದುವೆಯಾಗುವುದಾಗಿ ನಂಬಿಸಿದ್ದು ಯಶವಂತ್ ಈಗ ಆಕೆಯಿಂದ ದೂರ ಉಳಿದಿರುವುದಲ್ಲದೆ ಮದುವೆಗೆ ನಿರಾಕರಿಸಿದ್ದಾನೆ. ಆದರೆ, ವಾಣಿ ನಾನು ಅದೇ ಹುಡುಗನನ್ನು ಮದುವೆಯಾಗುತ್ತೇನೆಂದು ಪಟ್ಟುಹಿಡಿದಿದ್ದಾಳೆ.
ಈ ಸಂಬಂಧ ಈಕೆಯ ಪೋಷಕರು, ಸಂಬಂಧಿಕರು ಹಾಗೂ ಗ್ರಾಮಸ್ಥರು ಹುಡುಗನ ತಂದೆ ತಾಯಿಯರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರೂ ಒಪ್ಪಿಲ್ಲ. ಯುವಕ ನಾಪತ್ತೆಯಾಗಿದ್ದು ಈಗ ಆತನ ತಂದೆ-ತಾಯಿಯೂ ಪರಾರಿಯಾಗಿದ್ದಾರೆ. ಈ ಎಲ್ಲಾ ಘಟನೆಗಳಿಂದ ರೋಸಿ ಹೋಗಿರುವ ವಾಣಿ ಮತ್ತು ಆಕೆಯ ಕಡೆಯವರು ತಮ್ಮ ಗ್ರಾಮಸ್ಥರ ಸಹಕಾರದಿಂದ ಯುವಕನ ಮನೆಮುಂದೆ ಧರಣಿ ನಡೆಸುತ್ತಿದ್ದಾರೆ.