ಕರ್ನಾಟಕ

ಬಿಗ್ ಬಾಸ್ ಮನೇಲಿ ನಡೀತಿದೆ ಟಿಆರ್ ಪಿ ಗೇಮ್..! ಹುಚ್ಚಾ ವೆಂಕಟ್ ಮತ್ತೆ ಬಿಗ್‌ಬಾಸ್ ಮನೆ ಸೇರುತ್ತಾನಾ ….?

Pinterest LinkedIn Tumblr

Bigboss

ಬೆಂಗಳೂರು, ನ.15: ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಹುಚ್ಚಾ ವೆಂಕಟ್ ತನ್ನ ಇನ್ನೊಬ್ಬ ಪ್ರತಿಸ್ಪರ್ಧಿ ರವಿ ಮರೂರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಕುತಂತ್ರವಿರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದೆ. ಇತ್ತೀಚಿನ ರಿಯಾಲಿಟಿ ಶೋಗಳು ಟಿಆರ್‌ಪಿ ದರವನ್ನು ಹೆಚ್ಚಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯುತ್ತವೆ. ನಿನ್ನೆ ನಡೆದ ಘಟನೆಯೂ ಕೂಡ ಇದೇ ಆಗಿದ್ದೀರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದೆ. ಹುಚ್ಚಾ ವೆಂಕಟ್‌ನನ್ನು ಬಿಗ್ ಬಾಸ್ ಮನೆಯೊಳಗೆ ಎಲ್ಲರೂ ಹುಚ್ಚನಂತೆಯೇ ಕಾಣುತ್ತಿದ್ದರು.

ಅವರಲ್ಲಿಯ ಒಳ್ಳೆಯ ಗುಣಗಳನ್ನು ಅರ್ಥ ಮಾಡಿಕೊಳ್ಳುತ್ತಿರಲಿಲ್ಲ, ಅವರನ್ನು ಕೆರಳಿಸುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗುತ್ತಿತ್ತು. ಪ್ರತಿ ಬಾರಿಯೂ ಏನಾಗುತ್ತದೋ ಎಂದು ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವ ಪ್ರಯತ್ನ ವಾಹಿನಿಯವರು ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.

ನಿನ್ನೆ ತುಂಬಾ ಉದ್ರಿಕ್ತನಾದ ಹುಚ್ಚಾ ವೆಂಕಟ್ ತನ್ನ ಸ್ಪರ್ಧಿ ರವಿ ಮರೂರ್ ಮೇಲೆ ಹಲ್ಲೆ ಮಾಡಿ ಬಿಗ್‌ಬಾಸ್‌ನಿಂದ ಹೊರಹಾಕಲ್ಪಟ್ಟಿದ್ದಾರೆ. ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ಹುಚ್ಚಾ ಹುಡುಗರು ಪಟ್ಟು ಹಿಡಿದಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಜಗಳ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ಇದು ಮಿತಿ ಮೀರಿದೆ. ಇದೂ ಕೂಡ ಟಿಆರ್‌ಪಿ ಗಳಿಸುವ ತಂತ್ರವಿರಬಹುದೇನೋ ಎಂಬ ಅನುಮಾನವನ್ನು ಪ್ರೇಕ್ಷಕರು ವ್ಯಕ್ತಪಡಿಸುತ್ತಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ತಪ್ಪಿಗೆ ಶಿಕ್ಷೆ ಕೊಡುವ ನಿಯಮಗಳಿವೆ. ಮನೆಯಿಂದ ಹೊರ ಕಳುಹಿಸುವ ಅವಶ್ಯಕತೆ ಇರಲಿಲ್ಲ ಎನ್ನುತ್ತಾರೆ ಹುಚ್ಚಾ ವೆಂಕಟ್ ಅಭಿಮಾನಿಗಳು.

ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಇಂತಹ ಒಂದು ಘಟನೆ ನಡೆಯುತ್ತಿದ್ದಂತೆ ಎಲ್ಲಾ ಚಾನೆಲ್‌ಗಳಲ್ಲಿ ಇದನ್ನೇ ವೈಭವೀಕರಿಸಲಾಯಿತು. ಮೂರನೇ ಮಹಾಯುದ್ಧದಂತೆ ಇದನ್ನು ಬಿಂಬಿಸಲಾಗುತ್ತಿದೆ. ಸಾಮಾಜಿಕ ಕಳಕಳಿಯ ಸಾಕಷ್ಟು ಸಮಸ್ಯೆಗಳನ್ನು ವಾಹಿನಿಗಳು ಜನರ ಮುಂದಿಡಲು ಅವಕಾಶವಿದೆ. ಆದರೆ ಇಂತಹ ಸಣ್ಣ ಘಟನೆಗಳನ್ನು ಟಿಆರ್‌ಪಿಗೋಸ್ಕರ ವೈಭವೀಕರಿಸ ತೊಡಗಿರುವುದಕ್ಕೆ ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಗ್‌ಬಾಸ್ ಮನರಂಜನೆಯ ಶೋ ಆಗಬೇಕಿತ್ತು. ಆದರೆ ಅತಿರೇಕದ ಶೋ ಆಗಿ ಪರಿವರ್ತನೆಯಾಗುತ್ತಿದೆ.

ಇದರಲ್ಲಿ ವೈಯಕ್ತಿಕ ನಿಂದನೆಗಳು, ಪರಸ್ಪರ ಆರೋಪ-ಪ್ರತ್ಯಾರೋಪಗಳಾಗುತ್ತಿವೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೂ ಜನ ಈ ಕಾರ್ಯಕ್ರಮವನ್ನು ನೋಡುತ್ತಾರೆ. ಇಂತಹ ಶೋವನ್ನು ಯಾವ ರೀತಿ ನಡೆಸಿಕೊಡಬೇಕು, ಜನರಿಗೆ ಯಾವ ಸಂದೇಶ ಕೊಡಬೇಕು ಎಂಬುದನ್ನು ಕಾರ್ಯಕ್ರಮ ಹೊಣೆ ಹೊತ್ತವರು ಅರಿಯಬೇಕು. ಇಲ್ಲದೆ ಹೋದರೆ ಸಜ್ಜನ-ಸಹೃದಯಿ ವ್ಯಕ್ತಿಗಳು ಇದರಿಂದ ವಿಮುಖರಾಗುವ ಅಪಾಯವೂ ಇಲ್ಲದಿಲ್ಲ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಹುಚ್ಚಾ ವೆಂಕಟ್ ಮತ್ತೆ ಬಿಗ್‌ಬಾಸ್ ಮನೆ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನೂ ಒಂದು ವಾರದ ಬಳಿಕ ಬಿಗ್‌ಬಾಸ್ ಮನೆಗೆ ವೆಂಕಟ್ ಪ್ರವೇಶವಾಗಲಿದೆ. ಅದಕ್ಕಾಗಿ ಮನವೊಲಿಸುವ ಪ್ರಯತ್ನಗಳು ನಡೆದಿವೆ ಎನ್ನಲಾಗಿದೆ. ಎಲ್ಲವೂ ಟಿಆರ್‌ಪಿಗಾಗಿ ತಾನೇ….?

Write A Comment