ಹೊನ್ನಾವರ,: ಬೆಳಕಿನ ಹಬ್ಬ ದೀಪಾವಳಿ ಈ ಕುಟುಂಬಕ್ಕೆ ಕರಾಳ ಕತ್ತಲೆ ಎನಿಸಿಬಿಟ್ಟಿದೆ. ಹಬ್ಬದ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ. ಘೋರ ದುರಂತದಿಂದ ತತ್ತರಿಸಿ ಹೋಗಿರುವ ಕುಟುಂಬಕ್ಕೆ ಮುಂಬರುವ ದೀಪಾವಳಿಗಳೆಲ್ಲ ಕರಾಳ ನೆನಪನ್ನೇ ಹೊತ್ತು ತರುತ್ತದೆ ಎಂಬುದು ವಿಪರ್ಯಾಸ. ಹೌದು, ಇದು ನಡೆದಿರುವುದು ಉತ್ತರಕನ್ನಡದ ಹೊನ್ನಾವರದಲ್ಲಿ. ಹಬ್ಬಕ್ಕೆ ಬಟ್ಟೆ ಕೊಡಿಸಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಸಹೋದರಿಯರಿಬ್ಬರು ಸಾವಿಗೆ ಶರಣಾಗಿದ್ದು ಅವರ ಮನೆಯವರ ಆಂಕ್ರದನ ಮುಗಿಲು ಮುಟ್ಟಿದೆ.
ತಾಲೂಕಿನ ಸಾಲ್ಕೋಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮೃತರನ್ನು ಸುನೀತಾ ಶಂಕರ್ ಗೌಡ (16) ಹಾಗೂ ಮಂಗಳಾ ಶಂಕರ ಗೌಡ (14) ಎಂದು ಗುರುತಿಸಲಾಗಿದೆ.
ಕವಲಕ್ಕಿಯ ಸಿದ್ಧಿವಿನಾಯಕ ಪ್ರೌಢ ಶಾಲೆಯಲ್ಲಿ ಓದುತ್ತಿದ್ದ ಸಹೋದರಿಯರಿಬ್ಬರು ದೀಪಾವಳಿ ಹಬ್ಬಕ್ಕೆ ಬಟ್ಟೆಯನ್ನು ಕೊಂಡು ಕೊಳ್ಳಲು ತಮ್ಮ ತಾಯಿಯ ಬಳಿ ಹಣ ಕೇಳಿದ್ದರು. ಬಟ್ಟೆ ತೆಗೆದುಕೊಳ್ಳಲು ತಾಯಿ 3 ಸಾವಿರ ರೂಪಾಯಿ ಹಣ ನೀಡಿದ್ದರು. ಅಕ್ಕತಂಗಿಯರಿಬ್ಬರು ಹೆಚ್ಚಿನ ಹಣ ನೀಡುವಂತೆ ಹಠ ನೀಡಿದಿದ್ದರು ಎಂದು ತಿಳಿದು ಬಂದಿದೆ. ಆದರೆ ತಾಯಿ ಅದಕ್ಕೆ ನಿರಾಕರಿಸಿದ್ದರು. ಇದರಿಂದ ಮನನೊಂದ ಸುನೀತಾ ಮತ್ತು ಮಂಗಳಾ ಮನೆಯ ಬಳಿಯಲ್ಲಿರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.