ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ ಎಂಬ ಮಾತುಗಳು ಕಳೆದ ಹಲವು ತಿಂಗಳಿಂದ ಗಾಂಧಿನಗರದಲ್ಲಿ ಹರಿದಾಡುತ್ತಿತ್ತಾದರೂ, ನಾನಾ ಕಾರಣಗಳಿಂದ ಚಿತ್ರ ಮುಂದಕ್ಕೆ ಹೋಗುತ್ತಿತ್ತು.
ಆದರೆ ಇದೀಗ ಅಭಿಮಾನಿಗಳ ಬಹುದಿನಗಳ ಆಸೆ ಚಿಗುರೊಡೆದಿದ್ದು, ಶೀಘ್ರದಲ್ಲಿಯೇ ಶಿವಣ್ಣ ಮತ್ತು ಸುದೀಪ್ ಅಭಿನಯದ ಚಿತ್ರ ಸೆಟ್ಟೇರಲಿದೆ. ಅದೂ ಕೂಡ ಜೋಗಿ ಖ್ಯಾತಿಯ ನಿರ್ದೇಶಕ ಪ್ರೇಮ್ ಅವರ ಸಾರಥ್ಯದಲ್ಲಿ. ಹೌದು..ಶಿವಣ್ಣ ಮತ್ತು ಸುದೀಪ್ ಅಭಿನಯದ ಚಿತ್ರಕ್ಕೆ ನಿರ್ದೇಶಕ ಮತ್ತು ನಟ ಪ್ರೇಮ್ ಆಕ್ಷನ್ ಕಟ್ ಹೇಳುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಡಿಸೆಂಬರ್ 7ರಂದು ಚಿತ್ರದ ಮುಹೂರ್ತ ನೆರವೇರಲಿದ್ದು, ಮುಂಬರುವ ಜನವರಿಯಲ್ಲಿ ಚಿತ್ರದ ಚಿತ್ರೀಕರಣ ಆರಂಭಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಚಿತ್ರಕ್ಕೆ ಖ್ಯಾತ ನಿರ್ಮಾಪಕ ಸಿ.ಆರ್ ಮೋಹನ್ ಅವರು ಬಂಡವಾಳ ಹಾಕುತ್ತಿದ್ದು, ಈ ಬಹುಭಾಷಾ ಮತ್ತು ಬಹು ತಾರಾಗಣದ ಚಿತ್ರದ ಮುಹೂರ್ತವು ಡಿಸೆಂಬರ್ 7ರಂದು ಅದ್ಧೂರಿಯಾಗಿ ನಡೆಯಲಿದೆ ಎಂದು ತಿಳಿದು ಬಂದಿದೆ. ಶಿವಣ್ಣ ಮತ್ತು ಸುದೀಪ್ ಜೋಡಿ ಇದೇ ಮೊದಲ ಬಾರಿಗೆ ಬೆಳ್ಳಿತೆರೆಯನ್ನು ಹಂಚಿಕೊಳ್ಳುತ್ತಿದ್ದು, ಚಿತ್ರಕ್ಕೆ ‘ಕುಂಭಮೇಳ’ ಎಂದು ಶೀರ್ಷಿಕೆ ಇಡಲಾಗುತ್ತದೆ ಎಂಬ ಸುದ್ದಿಯೊಂದು ಗಾಂಧಿನಗರದಿಂದ ಕೇಳಿಬರುತ್ತಿದೆ.
ಸದ್ಯ ಸುದೀಪ್ ಕೆ.ಎಸ್ ರವಿಕುಮಾರ್ ನಿರ್ದೇಶನದ ಬಹುಭಾಷಾ ಚಿತ್ರದಲ್ಲಿ ತೊಡಗಿದ್ದು, ಹಾಗೆಯೇ ಶಿವಣ್ಣ “ಸಂತ ಕಬೀರ” ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಸ್ಯಾಂಡಲ್ ವುಡ್’ನ ಮಲ್ಟಿಸ್ಟಾರ್ಸ್ ಸಿನೆಮಾದ ಶೂಟಿಂಗ್ ಜನವರಿಯಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.