ಬೆಂಗಳೂರು, ನ. 9: ರೈತರು ಬೆಳೆದ ಮೆಕ್ಕೆಜೋಳವನ್ನು ಪ್ರತೀ ಕ್ವಿಂಟಾಲ್ಗೆ 1,600 ರೂ.ನಂತೆ ರಾಜ್ಯ ಸರಕಾರವೇ ನೇರವಾಗಿ ಖರೀದಿ ಮಾಡಬೇಕು ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಇಂದಿಲ್ಲಿ ಆಗ್ರಹಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಬೆಳೆದ ಮೆಕ್ಕೆಜೋಳವನ್ನು ದಲ್ಲಾಳಿಗಳು ಅಗ್ಗದ ದರದಲ್ಲಿ ಖರೀದಿಸಿ, ಕೆಎಂಎಫ್ಗೆ ಅದನ್ನು ದುಪ್ಪಟ್ಟು ಬೆಲೆಗೆ ಪೂರೈಕೆ ಮಾಡುತ್ತಿದ್ದಾರೆಂದು ಆರೋಪಿಸಿದರು.
ಕೆಎಂಎಫ್ ಮಾರುಕಟ್ಟೆ ದರಕ್ಕಿಂತ 1 ಸಾವಿರ ರೂ.ಹೆಚ್ಚಿಗೆ ನೀಡಿ ಮೆಕ್ಕೆಜೋಳ ಖರೀದಿಸುತ್ತಿದ್ದು, ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದ ರೇವಣ್ಣ, ರಾಜ್ಯ ಸರಕಾರವೇ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿ ಮಾಡುವುದರಿಂದ ಕೆಎಂಎಫ್ ಹಾಗೂ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಕಳಪೆ ಆಲೂಗಡ್ಡೆ ಬಿತ್ತನೆ ಬೀಜ ಪೂರೈಕೆ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, 20 ಸಾವಿರ ಹೆಕ್ಟೆರ್ ಪ್ರದೇಶದ ಆಲೂಗಡ್ಡೆ ಪ್ರಸ್ತುತ ವರ್ಷ 16 ಸಾವಿರ ಹೆಕ್ಟೆ0ರ್ಗೆ ಕುಸಿದಿದೆ ಎಂದ ಅವರು, ಈ ಬಗ್ಗೆ ರಾಜ್ಯ ಸರಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.