ಬೆಂಗಳೂರು: ಮೈಸೂರು ಹುಲಿ ಟಿಪ್ಪು ಸುಲ್ತಾನ್ ಹಿಂದೂ ವಿರೋಧಿ ಎಂಬುದು ಸುಳ್ಳು ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸುವವರು ಕೋಮುವಾದಿಗಳು ಎಂದು ಶನಿವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಟಿಪ್ಪು ಸುಲ್ತಾನ್ ಹಿಂದೂ ವಿರೋಧಿ ಎಂಬುದು ಸುಳ್ಳು, ಟಿಪ್ಪು ಓರ್ವ ಜಾತ್ಯಾತೀತ ವ್ಯಕ್ತಿ ಯಾಗಿದ್ದು ಹಿಂದೂಗಳಿಗೆ ಯಾವುದೇ ತೊಂದರೆ ನೀಡಿಲ್ಲ. ಶೃಂಗೇರಿ ,ನಂಜನಗೂಡು ದೇಗುಲಕ್ಕೂ ಟಿಪ್ಪು ನೆರವು ನೀಡಿದ್ದರು ಎಂದಿದ್ದಾರೆ.
ಟಿಪ್ಪು ಬ್ರಿಟಿಷರ ವಿರುದ್ದ ಮೂರು ಭಾರಿ ಯುದ್ಧ ಮಾಡಿದ್ದಾರೆ. ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಆರಂಭ ಮಾಡಿದ್ದೆ ಟಿಪ್ಪು ಸುಲ್ತಾನ್ ಎಂದು ಸಿಎಂ ಹೇಳಿದ್ದಾರೆ.
ಆರ್ಎಸ್ಎಸ್ನವರು ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದಾರೆ. ಅವರು ಕೋಮುವಾದಿಗಳು .ಟಿಪ್ಪು ಹಿಂದೂ ವಿರೋಧಿಯಾಗಿದ್ದ ಎನ್ನುವುದು ಸುಳ್ಳು’ ಎಂದರು.
ನವೆಂಬರ್ 10’ರಂದು ಟಿಪ್ಪು ಜನ್ಮದಿನಾಚರಣೆ ಆಚರಿಸಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಸರ್ಕಾರದ ಈ ನಿರ್ಧಾರದ ವಿರುದ್ಧ ಬಿಜೆಪಿ, ಸಂಘಪರಿವಾರ, ಕೆಲ ಕನ್ನಡ ಪರ ಸಂಘಟನೆಗಳು ಹಾಗೂ ಕ್ರೈಸ್ತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತ ಪಡಿಸಿದ್ದವು.