ಬೆಂಗಳೂರು, ನ.4- ಜೆಡಿಎಸ್-ಕಾಂಗ್ರೆಸ್ನೊಂದಿಗಿನ ಮೈತ್ರಿಯಲ್ಲಿ ಬಿಬಿಎಂಪಿಯ ಆಡಳಿತದ ಚುಕ್ಕಾಣಿ ಹಿಡಿದು ಎರಡೂವರೆ ತಿಂಗಳು ಪೂರೈಸುತ್ತಿದ್ದರೂ ಕಾಂಗ್ರೆಸ್ನಿಂದ ಸೂಕ್ತ ಸಹಕಾರ ಸಿಗುತ್ತಿಲ್ಲ. ಇದೇ ರೀತಿ ಅಸಹಕಾರ ಮುಂದುವರೆದರೆ ಬೆಂಬಲ ಹಿಂಪಡೆಯುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾರಂಭದಲ್ಲಿ ಮೈತ್ರಿ ಆದಾಗಲೇ ಪಶ್ಚಾತಾಪ ವಾಗಿತ್ತು. ಆದರೆ, ಪಕ್ಷದ ನಿರ್ಧಾರಕ್ಕೆ ಸಮ್ಮ್ಮತಿಸಿದ್ದೆವು.
ಈಗ ಫಲ ಅನುಭವಿಸುತ್ತಿದ್ದೇವೆ. ಜೆಡಿಎಸ್ ಸದಸ್ಯರಿರುವ ಕ್ಷೇತ್ರಗಳಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ. ಸದಸ್ಯರು ಕಣ್ಣೀರು ಹಾಕುವಂತಾಗಿದೆ ಎಂದರು. ಬಿಬಿಎಂಪಿ ಬೃಹತ್ ಕಾಮಗಾರಿ ಸ್ಥಾಯಿ ಸಮಿತಿಗೆ ಹಣವೇ ಬಿಡುಗಡೆಯಾಗಿಲ್ಲ. ಸದಸ್ಯರು ಏನು ಕೆಲಸ ಮಾಡಲು ಸಾಧ್ಯ. ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ.
ಮೂರು ಜನ ಸೂಪರ್ ಮೇಯರ್ಗಳು ಬಿಬಿಎಂಪಿ ಆಡಳಿತ ನಿಯಂತ್ರಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಜೆಡಿಎಸ್ ಸದಸ್ಯರ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಕೆಲಸ ನಡೆಯಲು ಸಹಕಾರವೂ ದೊರೆಯುತ್ತಿಲ್ಲ. ಹಾಗಾಗಿ ಸದಸ್ಯರು ದಿಕ್ಕುತೋಚದಂತಾಗಿದ್ದಾರೆ ಎಂದರು. ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಸಮಸ್ಯೆ ಪರಿಹಾರಕ್ಕೆ ಇದೊಂದೇ ಮಾರ್ಗವಲ್ಲ. ನಿಮ್ಮ ಆತ್ಮಹತ್ಯೆಯಿಂದ ನಿಮ್ಮದೇ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ. ರೈತರು ಮನಃವರ್ತನೆ ಹೊಂದಿ ನ.30ರೊಳಗೆ ಆತ್ಮಹತ್ಯೆ ನಿಲ್ಲಿಸದಿದ್ದರೆ ತಾವು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿ ನನ್ನ ದೇಹಕ್ಕೆ ನಾನೇ ದಂಡನೆ ನೀಡುತ್ತೇನೆ ಎಂದು ತಿಳಿಸಿದರು.
ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಸರ್ಕಾರ ನೀಡುತ್ತಿರುವ ಪರಿಹಾರ ಏನೇನೂ ಸಾಲುತ್ತಿಲ್ಲ. ಸಾಕಷ್ಟು ಸಂಕಷ್ಟದಲ್ಲಿ ರೈತರಿದ್ದಾರೆ ಎಂದರು. ಬಿಜೆಪಿ-ಕಾಂಗ್ರೆಸ್ ಗೋಮಾಂಸ ರಾಜಕಾರಣ ಬಿಟ್ಟು ಗೋವುಗಳನ್ನ ಸಾಕಿ ಸಲಹುವವರ ಬಗ್ಗೆ ಗಮನ ಹರಿಸಬೇಕಿದೆ ಎಂದು ತರಾಟೆಗೆ ತೆಗೆದುಕೊಂಡರು.