ಬೆಂಗಳೂರು, ಸೆ.29-ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಂಚಿಕೆ ಮಾಡಿಕೊಂಡಿರುವ ಜೆಡಿಎಸ್ಗೆ ಬಿಬಿಎಂಪಿಯಲ್ಲಿ ಯಾವುದೇ ಪ್ರತ್ಯೇಕ ಸ್ಥಾನಮಾನ ಸಿಗುವ ಸಾಧ್ಯತೆಗಳು ಇಲ್ಲ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಉಳಿದ ಎರಡು ಪಕ್ಷಗಳಿಗೆ ಪ್ರತ್ಯೇಕ ಪ್ರತಿಪಕ್ಷದ ಸ್ಥಾನಮಾನ ನೀಡಲಾಗುತ್ತಿತ್ತು. ಹಿಂದೆ ಬಿಬಿಎಂಪಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಆಡಳಿತ ನಡೆಸಿದಾಗ ಕೂಡ ಜೆಡಿಎಸ್ಗೆ ಪ್ರತ್ಯೇಕ ಸ್ಥಾನಮಾನ ನೀಡಲಾಗಿತ್ತು. ಕಳೆದ ಬಿಜೆಪಿ ಆಡಳಿತಾವಧಿಯಲ್ಲೂ ಜೆಡಿಎಸ್ಗೆ ಪ್ರತಿವರ್ಷದ ಸ್ಥಾನಮಾನ ನೀಡಲಾಗಿತ್ತು. ಆದರೆ ಈ ಬಾರಿ ಜೆಡಿಎಸ್ನಿಂದ ಆರಿಸಿ ಬಂದಿರುವವರು ಕೇವಲ 14 ಮಂದಿ ಮಾತ್ರ. ಇವರೆಲ್ಲ ಹೊಸಬರೇ ಆಗಿರುವುದು ವಿಶೇಷ.
ಅದರಲ್ಲಿ ಒಬ್ಬರು ಉಪಮೇಯರ್ ಆಗಿದ್ದಾರೆ. ಇಬ್ಬರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಸಿಕ್ಕರೆ ಉಳಿದವರು 11 ಮಂದಿ. ಈ ಹನ್ನೊಂದು ಮಂದಿಯೂ ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರಾಗಿ ನೇಮಕವಾಗಿದ್ದಾರೆ.
ಚುನಾವಣೆಯಲ್ಲಿ ಪ್ರತ್ಯೇಕವಾಗಿ ಆರಿಸಿ ಬಂದಿರುವ ಜೆಡಿಎಸ್ ಸದಸ್ಯರು ಕಾಂಗ್ರೆಸ್ನೊಂದಿಗೆ ಕೈ ಜೋಡಿಸಿ ಅಧಿಕಾರ ಹಂಚಿಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಜೆಡಿಎಸ್ಗೆ ಯಾವುದೇ ಪ್ರತ್ಯೇಕ ಸ್ಥಾನಮಾನ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಬಿಜೆಪಿಯ ಮಾಜಿ ಸದಸ್ಯ ಎನ್.ಆರ್.ರಮೇಶ್ ಆಯುಕ್ತರು-ಕೌನ್ಸಿಲ್ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಹಾಗಾಗಿ ಈ ಬಾರಿ ಜೆಡಿಎಸ್ಗೆ ಪ್ರತ್ಯೇಕ ಸ್ಥಾನಮಾನ ಸಿಗುವ ಸಾಧ್ಯತೆ ಇಲ್ಲ.