ಕರ್ನಾಟಕ

ಕಲಬುರ್ಗಿ ಹತ್ಯೆ ಪ್ರಕರಣ: ಪ್ರಣವಾನಂದ ಸ್ವಾಮೀಜಿಯನ್ನು ವಿಚಾರನೆಗೊಳಪಡಿಸಿದ ಸಿಐಡಿ; ಮಹಾರಾಷ್ಟ್ರ ಗಡಿಯಲ್ಲಿ ಯುವಕನ ಗೌಪ್ಯ ವಿಚಾರಣೆ

Pinterest LinkedIn Tumblr

pranavanda

ಹುಬ್ಬಳ್ಳಿ/ಹಾವೇರಿ: ಹಿರಿಯ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡ `ಅಖಿಲ ಭಾರತ ಹಿಂದೂ ಮಹಾಸಭಾ’ದ ರಾಜ್ಯಾಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಅವರನ್ನು ಗುರುವಾರ ವಶಕ್ಕೆ ಪಡೆದು ಸುದೀರ್ಘವಿಚಾರಣೆ ನಡೆಸಿದೆ.

ಡಾ. ಕಲಬುರ್ಗಿ ಅವರ ಸಂಶೋಧನಾತ್ಮಕ ಪ್ರಖರ ವಿಚಾರಗಳನ್ನು ಹಿಂದೂ ಸಂಘಟ ನೆಗಳು, ಬಹುತೇಕ ಹಿಂದೂ ಮಠಾಧೀಶರು,ಅಲ್ಲದೇ ಹೆಚ್ಚಿನ ಸಂಖ್ಯೆಯ ವೀರಶೈವ ಲಿಂಗಾಯತ ಮಠಾಧೀಶರೂ ಕಟುವಾಗಿ ವಿರೋಧಿಸುತ್ತಾ ಬಂದಿದ್ದರು. ಅಷ್ಟೇ ಅಲ್ಲದೇ ಚೆನ್ನಬಸವಣ್ಣನ ಹುಟ್ಟಿನ ಮೂಲ ಕೆದಕಿದ್ದ ಕಲಬುರ್ಗಿ ಅವರನ್ನು ಧಾರವಾಡದ ಮಠವೊಂದಕ್ಕೆ ಕರೆಸಿಕೊಂಡು `ಇನ್ನೆಂದೂ ಆ ವಿಚಾರ ಪ್ರಸ್ತಾಪಿಸುವುದಿಲ್ಲ’ ಎನ್ನುವ `ಮುಚ್ಚಳಿಕೆ ಪತ್ರ’ ಬರೆಸಿಕೊಳ್ಳಲಾಗಿತ್ತು. ಹಾಗಾಗಿ ಕಲಬುರ್ಗಿ ಹತ್ಯೆ`ವೈಚಾರಿಕತೆಯ ಹತ್ಯೆ’ ಎನ್ನುವ ಮಾತು ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ಡಿ.ಸಿ. ರಾಜಪ್ಪ ನೇತೃತ್ವ ದ ಸಿಐಡಿ ತಂಡ ಪ್ರಣವಾನಂದ ಸ್ವಾಮೀಜಿ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಬೆಂಗಳೂರಿನ ಸಮಾರಂಭವೊಂದರಲ್ಲಿ ಡಾ. ಕಲಬುರ್ಗಿ ಅವರು ಡಾ. ಯು.ಆರ್.ಅನಂತಮೂರ್ತಿ ಅವರ ಕೃತಿಯಲ್ಲಿನ `…ಮೂರ್ತಿಯ ಮೇಲೆ..’ ಸಾಲುಗಳನ್ನು ಉಲ್ಲೇಖಿಸಿದ್ದನ್ನು ಖಂಡಿಸಿ ಹಾವೇರಿಯಲ್ಲಿಬೀದಿಗಿಳಿದು ಹೋರಾಟ ಮಾಡಿದ್ದ ಪ್ರಣವಾನಂದ ಸ್ವಾಮೀಜಿ, `ಇಂಥವರನ್ನು ಗುಂಡಿಕ್ಕಿ ಕೊಲ್ಲಬೇಕು’ ಎಂದು ಅಬ್ಬರಿಸಿದ್ದರು.

ಈ ಪ್ರಚೋದನಕಾರಿ ಹೇಳಿಕೆಯ ಎಳೆ ಹಿಡಿದು ಗುರುವಾರ ಸಿಐಡಿ ಎಸ್ಪಿ ಡಿ.ಸಿ. ರಾಜಪ್ಪ ನೇತೃತ್ವದ ತಂಡ ರಾಣಿಬೆನ್ನೂರಿಗೆ ಹೋಗಿತ್ತು. ಅರೆಮಲ್ಲಾಪುರ ಗ್ರಾಮದ ಶರಣಬಸವೇಶ್ವರ ಮಠದಲ್ಲಿದ್ದ ಸ್ವಾಮೀಜಿಯನ್ನು ಪೊಲೀಸರು ಮಧ್ಯಾಹ್ನ 12 ಗಂಟೆಗೆ ಕರೆತಂದು ಸಿಐಡಿ ತಂಡಕ್ಕೆ ಒಪ್ಪಿಸಿದರು. ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹಲವು ಆಯಾಮ ಗಳಲ್ಲಿ ಸ್ವಾಮೀಜಿಯ ವಿಚಾರಣೆ ನಡೆಸಿದರು.

ಬಳಿಕ ಪ್ರಣವಾನಂದರ ಮೊಬೈಲ್ ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು, ಕರೆದಾಗ ಮತ್ತೆ ವಿಚಾರಣೆಗೆ ಹಾಜರಾಗ ಬೇಕು, ಸ್ಥಳೀಯ ಪೊಲೀಸರಿಗೆ ತಿಳಿಸದೆ ಜಿಲ್ಲೆ ಬಿಟ್ಟು ತೆರಳಬಾರದು ಎಂದು ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ವಿಚಾರಣೆ: ಡಾ. ಕಲಬುರ್ಗಿ ಹತ್ಯೆಯಾದ ಕೂಡಲೇ ತನಿಖೆಗೆ ಇಳಿದಿದ್ದ ಹುಬ್ಬಳ್ಳಿ ಪೊಲೀಸರ ಮಾಹಿತಿ ಆಧರಿಸಿ ಸಿಐಡಿ ಮಹಾರಾಷ್ಟ್ರ ಗಡಿ ಭಾಗದಿಂದ (ಅಥಣಿ ಸಮೀಪದ ಹಳ್ಳಿ) ಯುವಕನೊಬ್ಬನನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಕಳೆದ ಎರಡು ದಿನಗಳಿಂದ ಆತನನ್ನು ಗೌಪ್ಯ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಿದ್ದು, ಆತ ನೀಡಿದ ಹೇಳಿಕೆ ಅನುಸರಿಸಿ ಗುರುವಾರ ಪ್ರಣವಾನಂದರನ್ನು ಸುದೀರ್ಘ ವಿಚಾರಣೆನಡೆಸಿತು ಎನ್ನಲಾಗಿದೆ. ಪ್ರಣವಾನಂದರ ಜತೆ ಬೀದಿಗಿಳಿದು ಕಲಬುರ್ಗಿ ಅವರ ವಿರುದ್ಧ ಪ್ರತಿ ಭಟಿಸಿದ ವಿವಿಧ ಸಂಘಟನೆ ಮತ್ತು ಪ್ರಣವಾನಂದರ `ಅಖಿಲ ಭಾರತ ಹಿಂದೂ ಮಹಾಸಭಾ’ದ ಸದಸ್ಯರನ್ನು ಸಿಐಡಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ.

ಡಾ. ಕಲಬುರ್ಗಿ ಹತ್ಯೆ ಪ್ರಕರಣ ಬೇದಿಸಲು ಮೂರು ತಂಡಗಳಾಗಿ ಶೋಧಕ್ಕೆ ಇಳಿದಿದ್ದೆವು. ಬೇರೆ ಬೇರೆ ಕಡೆ ಸಂಚರಿಸಿ ಕೆಲವು ಮಹತ್ವದ ಮಾಹಿತಿ ಸಂಗ್ರಹಿಸಿದ್ದೆವು. ಅವನ್ನೆಲ್ಲ ಸಿಐಡಿಗೆ ಒಪ್ಪಿಸಿದ್ದೇವೆ. ಅವು ಈಗ ಸಿಐಡಿ ತನಿಖೆಗೆ ನೆರವಾಗಲಿವೆ. -ಬಿ.ಎಂ. ಘೋರಿ, ಡಿಸಿಪಿ ಹುಬ್ಬಳ್ಳಿ-ಧಾರವಾಡ ಕಮೀಶನರೇಟ್

Write A Comment