ಬೆಂಗಳೂರು, ಜು.20- ಅರವತ್ತೈದನೆ ವಸಂತಕ್ಕೆ ಕಾಲಿರಿಸಿದ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ ಅವರಿಗೆ ನಾಡಿನ 50ಕ್ಕೂ ಹೆಚ್ಚು ಮಠಾಧೀಶರು ಮತ್ತು ರಾಜಕೀಯ ಘಟಾನುಘಟಿಗಳು ಜನ್ಮ ದಿನದ ಶುಭಾಶಯ ಕೋರಿದರು.ತುಮಕೂರು ಸಿದ್ಧಗಂಗಾ ಮಠದ ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಕೋಡಿಹಳ್ಳಿಶ್ರೀ, ಕೊಳದ ಮಠ, ವಿಭೂತಿಪುರ, ಶಿವಗಂಗೆ ಮತ್ತಿತರ ಮಠಾಧೀಶರು ಸೇರಿದಂತೆ ನಾಡಿನ 50ಕ್ಕೂ ಹೆಚ್ಚು ಶ್ರೀಗಳು ಸೋಮಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಮಾಡಿದ್ದೇ ಅಲ್ಲದೆ, ಜನಸೇವೆಯನ್ನು ಮುಂದುವರೆಸುವಂತೆ ಹಾರೈಸಿದರು.
ಕೇಂದ್ರ ಸಚಿವ ಅನಂತ್ಕುಮಾರ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಆರ್.ಅಶೋಕ್, ಮಾಜಿ ಸಚಿವರಾದ ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ವಿಧಾನ ಪರಿಷತ್ ಸದಸ್ಯರಾದ ಅಶ್ವತ್ಥ ನಾರಾಯಣ್, ನಾರಾಯಣಸ್ವಾಮಿ, ಗೋ.ಮಧುಸೂದನ್ ಮತ್ತಿತರರ ಘಟಾನುಘಟಿ ರಾಜಕಾರಣಿಗಳು ಸೋಮಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಮಾಜಿ ಮೇಯರ್ ಶಾಂತಕುಮಾರಿ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಟಿ.ಎಂ.ರಂಗೇಗೌಡ, ಉಪಾಧ್ಯಕ್ಷ ಚಿನ್ನಪ್ಪ , ಆರ್.ವಿ.ಹರೀಶ್ ಮತ್ತಿತರರು ಸೋಮಣ್ಣ ಅವರಿಗೆ ಶುಭ ಹಾರೈಸಿದರು.
ವಿ.ಸೋಮಣ್ಣ ಅಭಿಮಾನಿ ಬಳಗದ ಸದಸ್ಯರಾದ ಕೆ.ಉಮೇಶ್ಶೆಟ್ಟಿ, ಎಚ್.ರವೀಂದ್ರ, ಮೋಹನ್ಕುಮಾರ್, ವಾಗೀಶ್, ಗಂಗಭೈರಯ್ಯ, ರೂಪಾದೇವಿ, ರಾಜೇಶ್ವರಿ ಬೆಳಗೋಡ್, ಶಕುಂತಲಾ ಲಕ್ಕಪ್ಪ, ಚಂದ್ರಶೇಖರಯ್ಯ, ವಿಶ್ವನಾಥಗೌಡ ಮತ್ತಿತರರು ಹುಟ್ಟುಹಬ್ಬ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಬಿಬಿಎಂಪಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು, ಸಾವಿರಾರು ಸಂಖ್ಯೆಯ ಅಭಿಮಾನಿಗಳು, ಬಂಧು-ಬಾಂಧವರು ಸೋಮಣ್ಣ ಅವರ ನಿವಾಸದ ಮುಂದೆ ಜಮಾಯಿಸಿದ್ದರು. ಜನಸೇವೆ ಮುಂದುವರೆಸುವೆ: ನಾಡಿನ ಹಲವಾರು ಶ್ರೀಗಳ ಆಶೀರ್ವಾದ, ನೂರಾರು ಅಭಿಮಾನಿಗಳ ಶುಭ ಹಾರೈಕೆಯಿಂದ ಸಂತುಷ್ಟರಾದ ವಿ.ಸೋಮಣ್ಣ ಅವರು ನನ್ನ ಕೊನೆಯ ಉಸಿರು ಇರುವವರೆಗೂ ಜನಸೇವೆ ಮಾಡುವುದಾಗಿ ಘೋಷಿಸಿದರು.