ಧಾರವಾಡ: ತಾನು ಪ್ರೀತಿಸುತ್ತಿದ್ದ ಕಾಲೇಜು ಕನ್ಯೆಯೊಂದಿಗೆ ಏಕಾಂತ ಕಳೆಯಲು ಬಯಸಿ ಕಾಡಿಗೆ ಕರೆದುಕೊಂಡು ಹೋದವನು ಜೈಲು ಪಾಲಾಗಿರುವ ಘಟನೆ ಇದು. ಈ ಘಟನೆ ಪ್ರೇಮಿಗಳಿಗೆ ಒಂದು ಎಚ್ಚರಿಕೆಯ ಪಾಠವೂ ಹೌದು.
ಹುಬ್ಬಳ್ಳಿಯ ಷರೀಫ್ ಎಂಬಾತ ತನ್ನ ಗೆಳತಿಯಾಗಿದ್ದ ಕಾಲೇಜು ಕನ್ಯೆಯನ್ನು ಗೋವಾ ರಸ್ತೆಯ ಕಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ. ಆಕೆಯೊಂದಿಗೆ ಏಕಾಂತ ಕಳೆಯಬಯಸುವುದು ಆತನ ಉದ್ದೇಶವಾಗಿತ್ತು. ಕಾಡಂಚಿನ ರಸ್ತೆಯಲ್ಲಿ ಷರೀಫನ ಬೈಕನ್ನು ಗಮನಿಸಿದ ಶಶಿಕಾಂತ್ ಮತ್ತು ಮಾರುತಿ ಎಂಬಿಬ್ಬರು ಈ ಅವಕಾಶವನ್ನು ಬಳಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ಇಬ್ಬರು ಷರೀಫ್ ಮತ್ತಾಕೆಯ ಪ್ರೇಮಿ ಬಳಿ ತೆರಳಿ ಚಾಕುವಿನಿಂದ ಬೆದರಿಸಿ ವಿವಸ್ತ್ರರನ್ನಾಗಿಸಿದ್ದಾರಲ್ಲದೇ ಅಶ್ಲೀಲ ಚಿತ್ರಗಳನ್ನೂ ತೆಗೆದುಕೊಂಡಿದ್ದಾರೆ. ಕಾಲೇಜು ಯುವತಿಯೊಂದಿಗೆ ಇವರಿಬ್ಬರು ಅಸಭ್ಯವಾಗಿ ವರ್ತಿಸಿದ ವೇಳೆ ಆಕೆಯ ಪ್ರಿಯಕರ ಷರೀಫ್ ತಿರುಗಿ ಬಿದ್ದಿದ್ದಾನೆ. ಶಶಿಕಾಂತನ ಚಾಕು ಕಸಿದುಕೊಂಡು ಅದರಿಂದ ಆತನಿಗೇ ಎರಡು ಬಾರಿ ಇರಿದಿದ್ದಾನೆ.
ಇದರಿಂದ ಹೆದರಿದ ಮಾರುತಿ ತನ್ನ ಮೊಬೈಲಿನೊಂದಿಗೆ ಓಡಿ ಹೋದರೆ, ಶಶಿಕಾಂತ್ ಸ್ವಲ್ಪ ದೂರ ಹೋಗುವಷ್ಟರಲ್ಲಿ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದಾನೆ. ಇವರುಗಳಿಂದ ತಪ್ಪಿಸಿಕೊಂಡರೆ ಸಾಕೆಂದಿದ್ದ ಷರೀಫ್ ಮತ್ತಾತನ ಗೆಳತಿ ಅಲ್ಲಿಂದ ಓಡಿ ಹೋಗಿದ್ದಾರೆ.
ಇತ್ತ ಪರಾರಿಯಾಗಿದ್ದ ಮಾರುತಿ ಮತ್ತೆ ಆ ಸ್ಥಳದ ಬಳಿ ಬಂದು ನೋಡಿದ ವೇಳೆ ಗೆಳೆಯ ಶಶಿಕಾಂತ್ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದಾನೆ. ಆತನ ಶವವನ್ನು ಪೊದೆಯೊಂದರಲ್ಲಿ ಮುಚ್ಚಿಟ್ಟ ಮಾರುತಿ ಅಲ್ಲಿಂದ ತೆರಳಿದ್ದಾನೆ. ಮಾರನೇ ದಿನ ಆನಾಥ ಶವ ಕಂಡ ದೂರು ಬಂದ ಹಿನ್ನೆಲೆಯಲ್ಲಿ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಸಂಪೂರ್ಣ ಮಾಹಿತಿ ಲಭ್ಯವಾಗಿದ್ದು, ಮಾರುತಿ ಹಾಗೂ ಷರೀಫ್ ಇಬ್ಬರನ್ನೂ ಬಂಧಿಸಿದ್ದಾರೆ.
ಗೆಳತಿಯ ಮಾನ ರಕ್ಷಿಸಲು ಹೋಗಿ ಷರೀಫ್ ಕೊಲೆಗಾರನ ಪಟ್ಟ ಹೊತ್ತಿದ್ದರೆ, ಆನಾಚಾರ ಮಾಡಲು ಗೆಳೆಯನೊಂದಿಗೆ ಹೋಗಿದ್ದ ಮಾರುತಿ ಇತ್ತ ಗೆಳೆಯನನ್ನೂ ಕಳೆದುಕೊಂಡಿರುವುದಲ್ಲೇ ತಾನೂ ಕಂಬಿ ಎಣಿಸುತ್ತಿದ್ದಾನೆ.