ಬೆಳಗಾವಿ, ಜೂ.30-ಅನ್ನಭಾಗ್ಯ, ಆರೋಗ್ಯಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ವಿದ್ಯಾಸಿರಿ ಸೇರಿದಂತೆ ಹಲವು ಭಾಗ್ಯಗಳನ್ನು ನಾಡಿನ ಜನರಿಗೆ ನೀಡುತ್ತಿರುವ ಸರ್ಕಾರ ಹೊಸದಾಗಿ ರೈತರಿಗೆ ಪಶುಭಾಗ್ಯ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ.
ರೈತರ ಆರ್ಥಿಕ ಸ್ಥಿತಿ ಉತ್ತಮಪಡಿಸುವ ನಿಟ್ಟಿನಲ್ಲಿ ಹೈನುಗಾರಿಕೆಯನ್ನು ಅಭಿವೃದ್ಧಿಪಡಿಸಲು ಪ್ರಸಕ್ತ ಸಾಲಿನಲ್ಲಿ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ. ಪಶು ಸಂಗೋಪನೆ ಇಲಾಖೆ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಸಾಲ ನೀಡುವುದು, ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸದಸ್ಯರು ಹೊಂದಿರುವ ಹೈನು ರಾಸುಗಳಿಗೆ ಮಾಡಿಸುವ ವಿಮೆಗೆ ಸಹಾಯಧನ ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಜೊತೆಗೆ ಕುರಿಗಾಗಿ ಸುರಕ್ಷಾ ಯೋಜನೆಯಡಿಯಲ್ಲಿ ಮೇಕೆಗಳು ಮತ್ತು ಕುರಿಗಳು ಮೃತಪಟ್ಟರೆ ಪರಿಹಾರ ಧನ ನೀಡುವುದು, ಗಿರಿರಾಜ್ ಕೋಳಿಮರಿ ವಿತರಣೆಯಲ್ಲಿ ಗ್ರಾಮೀಣ ಭಾಗದ ಹಿತ್ತಲ ಕೋಳಿ ಸಾಗಾಣಿಕೆಗೆ ಉತ್ತೇಜನ ನೀಡಲಾಗುವುದು. ಈಗಾಗಲೇ ನೀಡಲಾಗುತ್ತಿರುವ ಹಾಲು ಉತ್ಪಾದಕರ ಪ್ರೋತ್ಸಾಹಧನ ಮುಂದುವರಿಸುವ ಬಗ್ಗೆ, ಕಾಲುಬಾಯಿ ರೋಗ ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಪಲ್ಸ್ ಪೋಲಿಯೋ ಮಾದರಿಯಲ್ಲಿ ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ಹಾಕುವುದೂ ಸೇರಿದಂತೆ ಮುಂತಾದ ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದೆ.