ನವದೆಹಲಿ, ಜೂ.30-ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವನ್ನು ತೀವ್ರ ಬಿಕ್ಕಟ್ಟಿಗೆ ಸಿಲುಕಿಸಿರುವ ಐಪಿಎಲ್ ಕಳ್ಳಾಟದ ಕಿಂಗ್ಪಿನ್ ಲಲಿತ್ಮೋದಿ ವಿಷಯದಲ್ಲಿ ಕೊನೆಗೂ ಸರ್ಕಾರ ಈಗ ಒಂದು ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ದೇಶದ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಹಾಜರಾಗದೆ ಬ್ರಿಟನ್ನಲ್ಲಿ ತಲೆ ಮರೆಸಿಕೊಂಡಿರುವ ಕ್ರಿಕೆಟ್ ಕಳ್ಳದಂಧೆ ಪ್ರವೀಣ ಲಲಿತ್ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಬ್ರಿಟನ್ಗೆ ಮನವಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕ್ರಮ ಕೈಗೊಂಡಿದೆ.
ಭ್ರಷ್ಟಾಚಾರ ರಹಿತ ಸರ್ಕಾರ, ಪಾರದರ್ಶಕ ಆಡಳಿತದ ಭರವಸೆ ನೀಡಿದ್ದ ಮೋದಿ ಸರ್ಕಾರದ ಘನತೆಗೆ ಕುಂದುಂಟು ಮಾಡುವ ಸನ್ನಿವೇಶ ನಿರ್ಮಾಣ ಮಾಡಿರುವ ಐಪಿಎಲ್ ಬೆಟ್ಟಿಂಗ್ಕಿಂಗ್ ಲಲಿತ್ ಮೋದಿಯನ್ನು ಭಾರತದ ಸ್ವಾಧೀನಕ್ಕೆ ಪಡೆದು, ಇಲ್ಲಿ ಆತನನ್ನು ವಿಚಾರಣೆಗೆ ಒಳಪಡಿಸುವುದು ಸರ್ಕಾರದ ಉದ್ದೇಶವಾಗಿದೆ. ಲಲಿತ್ ಮೋದಿ ಅಕ್ರಮಗಳ ತನಿಖೆಗಾಗಿ ಜಾರಿ ನಿರ್ದೇಶನಾಲಯ ಸಿಂಗಪೂರ್ ಹಾಗೂ ಮಾರಿಷಿಸ್ಗೆ ಇಬ್ಬರು ಅಧಿಕಾರಿಗಳನ್ನು ಕಳುಹಿಸಿದೆ. ಸದ್ಯ ಬ್ರಿಟನ್ನಲ್ಲಿರುವ ಲಲಿತ್ ಮೋದಿಯನ್ನು ಭಾರತದ ವಶಕ್ಕೆ ಪಡೆಯಬೇಕಾದರೆ, ಇಂಟರ್ವೋಲ್ ಮೂಲಕ ರೆಡ್ಕಾರ್ನರ್ ನೋಟಿಸ್ ಜಾರಿ ಮಾಡುವ ಅಗತ್ಯವಿದೆ. ಈ ರೀತಿ ನೋಟಿಸ್ ಜಾರಿ ಮಾಡಲು ಆರೋಪಿ ಕುರಿತಾದ ಆರೋಪಗಳ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಸಲಹೆ ಪಡೆಯಲು ಜಾರಿ ನಿರ್ದೇಶನಾಲಯ ಮುಂದಾಗಿದೆ.