ಜಮ್ಮು, ಜೂ.30- ಜಮ್ಮು-ಕಾಶ್ಮೀರ ಕಣಿವೆ ರಾಜ್ಯದಲ್ಲಿ ಇಂದು ಮುಂಜಾನೆ ಭೂಕಂಪನ ಸಂಭವಿಸಿದ್ದು, ಜನತೆಯಲ್ಲಿ ಭಾರೀ ಆತಂಕ ಉಂಟುಮಾಡಿತು. ಆಫ್ಘಾನಿಸ್ಥಾನದ ಹಿಂದೂಕುಷ್ ಪರ್ವತದಲ್ಲಿ ಈ ಕಂಪನದ ಅಧಿಕೇಂದ್ರ ಪತ್ತೆಯಾಗಿದೆ ಎಂದು ಭೂ ವಿಜ್ಞಾನಿಗಳು ಹೇಳಿದ್ದಾರೆ.
ಇಂದು ಬೆಳಗಿನ ಜಾವ 3.40ರ ಸುಮಾರಿನಲ್ಲಿ ಇಡೀ ಕಣಿವೆಯಲ್ಲಿ ಲಘುವಾಗಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ಪರಿಣಾಮ 5.5ರಷ್ಟಿತ್ತು ಎಂದು ಹೇಳಲಾಗಿದೆ. ಪವಿತ್ರ ರಂಜಾನ್ ಹಬ್ಬದ (ಉಪವಾಸ) 12ನೆ ದಿನವಾದ ಇಂದು ಮುಸ್ಲಿಂ ಸಮುದಾಯದವರು ಪ್ರಾರ್ಥನೆ, ಆಹಾರ ತಯಾರಿಯಲ್ಲಿ ತೊಡಗಿದ್ದರು. ಸದ್ಯ ಯಾವುದೇ ಜೀವಹಾನಿ, ಆಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ. 2005ರ ಅಕ್ಟೋಬರ್ನಲ್ಲಿ ಸಂಭವಿಸಿದ್ದ 7.8ರಷ್ಟು ತೀವ್ರತೆಯ ಭೂಕಂಪದಲ್ಲಿ 40 ಸಾವಿರ ಜನ ಬಲಿಯಾಗಿದ್ದರು. ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು. ಸಾವಿರಾರು ಜಾನುವಾರುಗಳು ಜೀವ ಕಳೆದುಕೊಂಡಿದ್ದವು.