ಬೆಳಗಾವಿ: ರೈತನ ಸರಣಿ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಪಾದಯಾತ್ರೆ ಮೂಲಕ ಬೆಳಗಾವಿಗೆ ತೆರಳಿ, ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, 2013-14ರಲ್ಲಿ ಸರ್ಕಾರ ರೈತರಿಗೆ ಸಹಾಯ ಧನ ಘೋಷಿಸಿತ್ತು. ಕಬ್ಬು ಬೆಳೆದ ರೈತರಿಗೆ ಸಹಾಯ ಧನ ಘೋಷಿಸಿದ ಸರ್ಕಾರ ಅದನ್ನು ನೀಡದೆ ಆಟವಾಡಿಸುತ್ತಿದೆ. ಸರ್ಕಾರದ ಈ ಧೋರಣೆಯಿಂದ ಮನನೊಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ವಿಷಾಧಿಸಿದ್ದಾರೆ.
ರೈತರ ಬಾಕಿ ಹಣ ನೀಡುವುದು ಮತ್ತು ರೈತರ ಸಾಲ ಮನ್ನಾ ಮಾಡುವ ತಾಕತ್ತು ಸರ್ಕಾರಕ್ಕಿಲ್ಲ. ಈ ಹಿನ್ನಲೆಯಲ್ಲಿ ಪ್ರತಿನಿತ್ಯ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರೈತರ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ. ರೈತರು ಎಷ್ಟೇ ಪ್ರತಿಭಟನೆ, ಹೋರಾಟ ಮಾಡಿದರು ಸರ್ಕಾರ ಮಾತ್ರ ಸ್ಪಂದಿಸುತ್ತಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ರೈತರ ಸರಣಿ ಸಾವು ತಡೆಯಬೇಕೆಂಬುದು ನನ್ನಾಸೆ. ಆದ್ದರಿಂದ ನಾನು ರೈತರ ಸಮಸ್ಯೆ ಆಲಿಸಲು ಪಾದಯಾತ್ರೆ ನಡೆಸಿದೆ. ಪಾದಯಾತ್ರೆ ಮೂಲಕ ರೈತರ ಅನೇಕ ಸಮಸ್ಯೆಗಳ ಬಗ್ಗೆ ತಿಳಿದುಕೊಂಡೆ. ನಾನು ಪಾದಯಾತ್ರೆ ನಡೆಸುವುದರ ಬಗ್ಗೆ ಹಿತೈಷಿಗಳು ಆತಂಕ ವ್ಯಕ್ತಪಿಡಿಸಿದ್ದರು. ಆದರೆ, ರೈತರ ಜೀವಕ್ಕಿಂತ ನನ್ನ ಆರೋಗ್ಯ ನನಗೆ ಮುಖ್ಯವಲ್ಲ ಎಂದ ಅವರು 1 ತಿಂಗಳಲ್ಲಿ ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂಧಿಸಬೇಕು. ಈ ವಿಚಾರವಾಗಿ ಸರ್ಕಾರಕ್ಕೆ ಹಕ್ಕೋತ್ತಾಯ ಮಂಡಿಸುತ್ತೇವೆ ಎಂದು ತಿಳಿಸಿದ್ದಾರೆ.