ಹಾವೇರಿ, ಜೂ. 27: ಸಾಲಬಾಧೆ ತಾಳಲಾರದೆ ರೈತನೊಬ್ಬ ತನ್ನ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕುರುಗುಂದ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಜಗದೀಶ್ ಕಿಡಗಣ್ಣನವರ (30) ಎಂದು ಹೇಳಲಾಗಿದ್ದು, ಈತ ನಗರದ ಎಸ್ಬಿಎಂ ಬ್ಯಾಂಕ್ನಲ್ಲಿ 2.5 ಲಕ್ಷ ರೂ.ಬೆಳೆ ಸಾಲ ಪಡೆದಿದ್ದ ಎಂದು ಹೇಳಲಾಗಿದೆ.
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ತಾನು ಬೆಳೆದಿದ್ದ ಭತ್ತ ಹಾಗೂ ಮೆಕ್ಕೆಜೋಳ ಸಂಪೂರ್ಣ ಹಾಳಾದ ಹಿನ್ನೆಲೆಯಲ್ಲಿ ಆತ ಆತಂಕಕ್ಕೊಳಗಾಗಿದ್ದ ಎನ್ನಲಾಗಿದೆ. ನಿನ್ನೆ ಸಂಜೆ ಹೊಲಕ್ಕೆ ಹೋಗಿ ಅಲ್ಲೆ ಕ್ರಿಮಿನಾಶಕ ಸೇವಿಸಿ ಜಗದೀಶ್ ಸಾವಿಗೆ ಶರಣಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಗುತ್ತಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.