ಬೆಂಗಳೂರು,ಜೂ.27: ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ಮೈಸೂರು-ಕೊಡಗು ಸಂಸದ ಪ್ರತಾಪ್ಸಿಂಹ ಅವರ ಸಹೋದರ ವಿಕ್ರಮ್ಸಿಂಹ ಅವರನ್ನು ಪೊಲೀಸರು ಕಳೆದ ರಾತ್ರಿ ಬಂಧಿಸಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬಿದರಹಳ್ಳಿ ಎಂಬಲ್ಲಿ ವಿಕ್ರಮ್ಸಿಂಹ ಹಾಗೂ ಇತರ 9 ಮಂದಿ ಜೂಜಾಟದಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಕಲೇಶಪುರ ಡಿವೈಎಸ್ಪಿ ಸ್ನೇಹ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ವಿಕ್ರಮ್ಸಿಂಹ ಹಾಗೂ ಇತರ 9 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರಿಂದ 14 ಸಾವಿರ ರೂ. ನಗದು, 14 ಮೊಬೈಲ್ ಫೋನ್ ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಿದರಹಳ್ಳಿಯಲ್ಲಿ ಭಾರೀ ಮಟ್ಟದ ಜೂಜಾಟ ನಡೆಯುತ್ತಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರೇ ದೂರು ನೀಡಿದ್ದರು ಎನ್ನಲಾಗಿದೆ. ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್ಗುಪ್ತ ಸೂಚನೆಯಂತೆ ಡಿವೈಎಸ್ಪಿ ಸ್ನೇಹ ಹಾಗೂ ಇನ್ಸ್ಪೆಕ್ಟರ್ ನೇತೃತ್ವದ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಜೂಜಾಟದಲ್ಲಿ ತೊಡಗಿದ್ದ ವಿಕ್ರಮ್ಸಿಂಹ ಹಾಗೂ ಇತರರನ್ನು ಬಂಧಿಸಿದ್ದಾರೆ.