ಚಿತ್ರದುರ್ಗ: ಮಗಳ ಮೇಲೆ ಕಣ್ಣುಹಾಕಿದ್ದ ಅಳಿಯನನ್ನೇ ಮಾವ ಕೊಲೆ ಮಾಡಿ ಜೈಲು ಸೇರಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಒಂದೆಡೆ ಮಾವನ ಮಗಳ ಮೇಲೆ ಕಣ್ಣುಹಾಕಿದ ತಪ್ಪಿಗೆ ಅಳಿಯ ಹೆಣವಾಗಿ ಹೋಗಿದ್ದಾನೆ. ಇನ್ನೊಂದೆಡೆ ಮಗಳನ್ನು ಚೆನ್ನಾಗಿ ಓದಿಸಬೇಕು ಎಂದುಕೊಂಡಿದ್ದ ತಂದೆ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯ ಗರಗ ಗ್ರಾಮದ ಹರೀಶ್ ಕೊಲೆಯಾದ ವ್ಯಕ್ತಿ. ಈತ ಚಿತ್ರದುರ್ಗದ ಹೊಳಲ್ಕೆರೆಯಲ್ಲಿರುವ ತನ್ನ ಮಾವನ ಮಗಳನ್ನು ತುಂಬಾ ಇಷ್ಟಪಡುತ್ತಿದ್ದನಂತೆ. ಈ ಸಂಬಂಧ ಮಾವ ನಾಗರಾಜ್ ಹಲವು ಬಾರಿ ಬುದ್ದಿ ಹೇಳಿದ್ದರೂ ಮೃತ ಹರೀಶ್ ಮಾತು ಕೇಳಿರಲಿಲ್ಲ. ಬದಲಾಗಿ ಮಗಳನ್ನು ಕೊಟ್ಟು ಮದುವೆ ಮಾಡು ಎಂದು ಪೀಡಿಸುತ್ತಿದ್ದನಂತೆ. ಕೊನೆಗೆ ಯಾರು ಇಲ್ಲದಿದ್ದಾಗ ಆಕೆಯ ಲೈಂಗಿಕ ದೌರ್ಜನ್ಯ ನಡೆಸಲು ಹೋಗಿದ್ದಕ್ಕೆ ಮಾವ ನಾಗರಾಜ್ ಆತನನ್ನು ಕೊಲೆ ಮಾಡಿದ್ದಾರೆ.
ಕೊಲೆ ಮಾಡಿದ್ದ ಆರೋಪಿ ಪೊಲೀಸರ ಕಣ್ಣುತಪ್ಪಿಸಲು ತನ್ನ ಅಳಿಯನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಕೊನೆಗೆ ಅನುಮಾನದ ಮೇಲೆ ಪೊಲೀಸರು ತನಿಖೆ ನಡೆಸಿದಾಗ ಮಾವ ನಾಗರಾಜನೇ ಕೊಲೆಗಾರ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಅಷ್ಟೆ ಅಲ್ಲದೇ ಆತನಿಗೆ ಸಹಕರಿಸಿದ ಇನ್ನಿಬ್ಬರನ್ನು ಬಂಧಿಸಿರುವುದಾಗಿ ಚಿತ್ರದುರ್ಗ ಎಸ್ಪಿ ಅನುಚೇತ್ ಹೇಳಿದ್ದಾರೆ.