ಮೈಸೂರು, ಜೂ.22: ಮದುವೆ ದಿನ ಕೈಕೊಟ್ಟು ಓಡಿ ಹೋಗಿದ್ದ ವರ ಮತ್ತೆ ವಾಪಸ್ ಬಂದು ಅದೇ ಹುಡುಗಿಯನ್ನು ವರಿಸಿದ್ದಾನೆ!
ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಕಳೆದ ವಾರ ವಿವಾಹವಾಗಲೆಂದು ಮೈಸೂರಿನ ಬಲ್ಲಾಳ ವೃತ್ತದಲ್ಲಿರುವ ಬೌದ್ಧವಿಹಾರವನ್ನು ಈ ಜೋಡಿ ಸಂಪರ್ಕಿಸಿತ್ತು. ಮದುವೆಗೆ ಎಲ್ಲ ತಯಾರಿಯೂ ನಡೆದಿತ್ತು. ಆದರೆ ಮದುವೆ ಗಂಡೇ ಪರಾರಿಯಾಗಿದ್ದ. ಇದಾದ ಬಳಿಕ ಲಕ್ಷ್ಮಿಪುರಂ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ನಡುವೆ ಮನಸ್ಸು ಬದಲಿಸಿದ ವರ ಮರಳಿ ಬಂದು ಮದುವೆ ಒಕೆ ಎಂದಿದ್ದಾರೆ. ಇದಾದ ಬಳಿಕ ಅದೇ ಬೌದ್ಧವಿಹಾರದಲ್ಲಿ ಮದುವೆ ನಡೆದಿದೆ. ಅನ್ಯೋನ್ಯವಾಗಿ ಬದುಕುವಂತೆ ಇಬ್ಬರಿಗೂ ಅಲ್ಲಿ ಸೇರಿದ್ದವರು ಬುದ್ಧಿವಾದ ಹೇಳಿದ್ದಾರೆ.
ಅಂದ ಹಾಗೆ ಕೈಕೊಟ್ಟ ವರ ಚಾಮರಾಜನಗರ ತಾಲೂಕು ಹೊನ್ನೂರು ಗ್ರಾಮದ ಸುಬ್ರಹ್ಮಣಿ. ಪ್ರೀತಿಸಿದ ಹುಡುಗನನ್ನೇ ವರಿಸಿದ ವಧು ಸುನಂದಾ. ಈ ಇಬ್ಬರು ಎಚ್.ಡಿ. ಕೋಟೆಯ ಸುನಂದ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು.