ಆನೇಕಲ್. ಜೂ.12-ರಾಜ್ಯದಲ್ಲಿ ಮಲ ಹೊರುವ ಪದ್ಧತಿಯಂತಹ ಅನಿಷ್ಟ ಪದ್ಧತಿಗಳು ನಿಷೇಧವಿದ್ದರೂ ಹಾಗೂ ಅದಕ್ಕೆ ಪ್ರಚೋದನೆ ಮಾಡುವವರ ವಿರುದ್ಧ ಸರ್ಕಾರಗಳು ಕಠಿಣ ಕಾನೂನು ರೂಪಿಸಿದ್ದರೂ ಸಹ ಪಂಚಾಯಿತಿ ಅಧಿಕಾರಿಗಳ ಸಮ್ಮುಖದಲ್ಲಿಯೇ ಮಲವನ್ನು ಅಮಾಯಕ ಕಾರ್ಮಿಕರ ಕೈಯಲ್ಲಿ
ಸ್ವಚ್ಛಮಾಡಿಸಿರುವ ಘಟನೆ ತಾಲ್ಲೂಕಿನ ಚಂದಾಪುರ ಗ್ರಾಮದ ಗೌರಮ್ಮ ಬಡಾವಣೆಯಲ್ಲಿ ನಡೆದಿದೆ. ಏಷ್ಯಾ ಖಂಡದಲ್ಲಿಯೇ ಪ್ರಸಿದ್ಧಿ ಹೊಂದಿರುವ ಎಲೆಕ್ಟ್ರಾನಿಕ್ ಸಿಟಿ ಚಂದಾಪುರ ಗ್ರಾಮಕ್ಕೆ ಕೂಗಳತೆ ದೂರವಿದ್ದರೂ ಸಹ ಅನಿಷ್ಟ ಪದ್ಧತಿಗಳು ಇನ್ನು ಜೀವಂತವಾಗಿರುವುದು ಸೋಜಿಗದ ಸಂಗತಿಯಾಗಿದೆ. ಚಂದಾಪುರ ಗ್ರಾಮ ಪಂಚಾಯಿತಿಗೆ ಪ್ರತಿ ವರ್ಷಕ್ಕೆ 5 ಕೋಟಿ ರೂಪಾಯಿ ವರಮಾನವಿದ್ದರೂ ಸಹ ಯಂತ್ರೋಪಕರಣಗಳಲ್ಲಿ ಮಾಡುವಂತಹ ಕೆಲಸಗಳನ್ನು ಅಮಾಯಕ ಕೂಲಿ ಕಾರ್ಮಿಕರ ಕೈಯಲ್ಲಿ ಮಾಡಿಸುವುದು ಯಾವ ನ್ಯಾಯ ಸ್ವಾಮಿ ಎಂದು ಪ್ರಶ್ನಿಸುತ್ತಾರೆ.
ಈಗಾಗಲೇ ಚಂದಾಪುರ ಗ್ರಾಮದಲ್ಲಿ ಮಲ ಹೊರುವ ಪ್ರಕರಣ ದಾಖಲಾಗಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿದ್ದು ಮತ್ತು ಅದೇ ಅಧಿಕಾರಿಗಳ ಸಮ್ಮುಖದಲ್ಲಿ ಮತ್ತೊಂದು ಪ್ರಕರಣ ಬಯಲಾಗಿದೆ. ಜನ ಸೇವೆಯೇ ನಮ್ಮ ಧ್ಯೇಯ ಎಂಬ ಸುಳ್ಳು ಆಶ್ವಾಸನೆ ನೀಡುವ ಜನಪ್ರತಿನಿಧಿಗಳ ಕಣ್ಮುಂದೆ ಇಂತಹ ಕೃತ್ಯ ನಡೆದರೂ, ಕೂಲಿ ಕಾರ್ಮಿಕರ ರಕ್ಷಣೆಗೆ ಮಾಡುವುದನ್ನು ಬಿಟ್ಟು ಈ ಗ್ರಾಗಲೇ ನಮ್ಮ ಅವಧಿ ಮುಗಿದಿದ್ದು ಹಾಗೂ ಚಂದಾಪುರ ಗ್ರಾಮ ಪಂಚಾಯಿತಿಯನ್ನು ಸರ್ಕಾರ ಪುರಸಭೆಗೆ ಮಾರ್ಪಡಿಸಿದ್ದು ಪುರಸಭೆ ಚುನಾವಣೆಗೆ ಸಿದ್ದರಾಗುತಿದ್ದೇವೆ ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬ ಜಾಣ ಪಕ್ಷಿಯಂತೆ ಜಾರಿಕೊಂಡರೆ ಜನರ ರಕ್ಷಣೆ ಮಾಡುವವರು ಯಾರು ಎನ್ನುತ್ತಾರೆ.
ಇಷ್ಟೆಲ್ಲಾ ಅನಾಹುತ ನಡೆದರು ಸಹ ಯಾವುದೇ ಇಲಾಖೆ ಅಧಿಕಾರಿಗಳಾಗಲಿ ಸ್ಥಳಕ್ಕೆ ಆಗಮಿಸದಿರುವುದು ಅಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಸರ್ಕಾರಗಳು ಬಡವರ ಅಭಿವೃದ್ದಿಗೆ ಎಷ್ಠೇ ಯೋಜನೆಗಳು ರೂಪಿಸಿದ್ದರು ಅದು ಬಡವರ ಕೈ ಸೇರುವಷ್ಟರಲ್ಲಿ ಶೂನ್ಯವಾಗಿದ್ದು ಸರ್ಕಾರದ ಸವಲತ್ತುಗಳನ್ನು ಉಳ್ಳವ/ಶ್ರೀಮಂತ ವರ್ಗದ ಕೈಸೇರುತಿದೆ ಎಂದು ಕೂಲಿ ಕಾರ್ಮಿಕರು ಪತ್ರಿಕೆಗೆ ತಮ್ಮ ಅಳಲನ್ನು ತೋಡಿಕೊಂಡರು. ತಾಲ್ಲೂಕಿನಲ್ಲಿ ಸುಮಾರು 100ಕ್ಕೂ ಹೆಚ್ಚು ದಲಿತರಪರ ಹಾಗೂ ಕನ್ನಡಪರ ಸಂಘ-ಸಂಸ್ಥೆಗಳಿದ್ದರೂ ತಾಲ್ಲೂಕಿನಲ್ಲಿ ಮಲ ಹೊರುವಂತಹ ಅನಿಷ್ಟ ಪದ್ದತಿಗಳು ಇನ್ನೂ ಜೀವಂತವಾಗಿರುವುದು ನಾಚಿಗೇಡಿನ ಸಂಗತಿಯಾಗಿದೆ.ಅನಿಷ್ಟ ಪದ್ಧತಿಗೆ ಪ್ರಚೋದನೆ ನೀಡಿರುವ ಅಧಿಕಾರಿಗಳ ಮೇಲೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಅನಿಷ್ಟ ಪದ್ಧತಿಯಲ್ಲಿ ತೊಡಗಿರುವ ಬಡ ಕೂಲಿ ಕಾರ್ಮಿಕರನ್ನು ಸರ್ಕಾರ ಗುರ್ತಿಸಿ ಬಡ ಕಾರ್ಮಿಕರಿಗೆ ಶಾಶ್ವತ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ಪುರಸಭೆ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.