ಬೆಂಗಳೂರು: ಐಎಎಸ್ ಅಧಿಕಾರಿ ಡಿಕೆ ರವಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಸೋಮವಾರ ರವಿಯವರ ಆಪ್ತ ಸಹಾಯಕರಾಗಿದ್ದ ಧರ್ಮೇಂದ್ರ ಪ್ರಸಾದ್, ಎಫ್ ಡಿಎ ನಾಗರಾಜ್, ಕಾರು ಚಾಲಕ ಗುರಪ್ಪ ಹಾಗೂ ಗನ್ ಮ್ಯಾನ್ ಸಂತೋಷ್ ಅವರ ವಿಚಾರಣೆ ನಡೆಸುವ ಮೂಲಕ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ರವಿ ಅವರ ಜೊತೆ ಕೋಲಾರದಲ್ಲಿ ಕೆಲಸ ಮಾಡಿದವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು. ಆ ನಿಟ್ಟಿನಲ್ಲಿ ಇಂದು ಬೆಂಗಳೂರಿನ ಸಿಬಿಐ ಕಚೇರಿಯಲ್ಲಿ ನಾಲ್ವರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಕೋಲಾರದ ಸುತ್ತಮುತ್ತ ಆಸ್ತಿ ಖರೀದಿ ಸೇರಿದಂತೆ ಹಲವಾರು ವಿಷಯಗಳ ಕುರಿತು ಸಿಬಿಐ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಿಬಿಐ ಅಧಿಕಾರಿಗಳು ಕೋಲಾರ ಕಚೇರಿಯ ಅಂದಿನ ಕೆಲವು ಕಡತ, ಸಿಡಿಗಳ ಪರಿಶೀಲನೆ ನಡೆಸಿತ್ತು.
-ಉದಯವಾಣಿ