ಬೆಳಗಾವಿ, ಜೂ.5-ರೈತರಿಗೆ ವರದಾನವಾದ ಉತ್ತರ ಕರ್ನಾಟಕದ ಕಳಸಾ ಬಂಡೂರಿ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಕನ್ನಡ ಚಳುವಳಿ ಪಕ್ಷದ ವಾಟಾಳ ನಾಗರಾಜ್ ಹಾಗೂ ಡಾ.ರಾಜ್ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಸುವರ್ಣ ಸೌಧದ ಮುಂದೆ ಇಂದು ಪ್ರತಿಭಟನೆ ನಡೆಸಿ
ರಸ್ತೆ ತಡೆ ನಡೆಸಿದರು. ಉತ್ತರ ಕರ್ನಾಟಕದ ಪ್ರಮುಖ ಕಳಸ ಬಂಡೂರಿ ಯೋಜನೆಯನ್ನು ಜಾರಿಗೊಳಿಸಬೇಕು. ಈ ಭಾಗದ ಎಲ್ಲಾ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು, ಈ ಸಂಬಂಧ ಜೂನ್ 20 ರಂದು ಹುಬ್ಬಳ್ಳಿಯಿಂದ ಗೋವಾವರೆಗೆ ಜಾಥಾ ನಡೆಸಲಾಗುವುದು ಎಂದರು. ಯಾವುದೇ ಕಾರಣಕ್ಕೂ ರಾಜ್ಯ ವಿಭಜನೆ ಬಗ್ಗೆ ಮಾತನಾಡಬಾರದು. ಇದಕ್ಕೆ ಆಸ್ಪದ ಕೊಡುವುದಿಲ್ಲವೆಂದ ವಾಟಾಳ್ ನಾಗರಾಜ್ರವರು ಸಮಸ್ತ ಕರ್ನಾಟಕ ಅಭಿವೃದ್ಧಿ ನಮ್ಮ ಚಿಂತನೆ ಎಂದರು. ಡಾ.ರಾಜ್ ಅಭಿಮಾನಿ ಸಂಘದ ಸಾ.ರಾ.ಗೋವಿಂದು ಮಾತನಾಡಿ, ದಕ್ಷಿಣ ಭಾಗದ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಂಡಂತೆ ಉತ್ತರ ಕರ್ನಾಟಕದ ಯೋಜನೆಗಳಿಗೂ ಹೆಚ್ಚು ಒತ್ತು ನೀಡಬೇಕು. ಅಖಂಡ ಕರ್ನಾಟಕ ನಮ್ಮ ಪರಿಕಲ್ಪನೆ ಎಂದುಹೇಳಿದರು. ಶಾಸಕರಾದ ಉಮೇಶ್ಕತ್ತಿ ಹಾಗೂ ಎ.ಎಸ್.ಪಾಟೀಲ ನಡಹಳ್ಳಿ ಅವರು ವೈಯಕ್ತಿಕ ಹಿತಾಸಕ್ತಿಗೋಸ್ಕರ ವಿಭಜನೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು. ಕನ್ನಡ ಸೇನೆಯ ಕೆ.ಆರ್.ಕುಮಾರ್, ಎಚ್.ವಿ.ಗಿರೀಶ್ಗೌಡ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.