ಬೆಂಗಳೂರು, ಜೂ.3- ಕಬ್ಬು ಬೆಳೆಗಾರರ ಬಾಕಿ ಹಣ ನೀಡುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಕರ್ನಾಟಕ ಉಚ್ಛ ನ್ಯಾಯಾಲಯವು ಕಬ್ಬು ಬೆಳೆಗಾರರಿಗೆ ಶಾಸನಾತ್ಮಕ ಬೆಲೆಯನ್ನು ವಿಳಂಬ ಮಾಡದೆ ತಕ್ಷಣವೇ ರೈತರಿಗೆ ಹಣ ಪಾವತಿ ಮಾಡುವಂತೆ ಆದೇಶ ನೀಡಿತ್ತು.
ಆದರೆ, ಇಲ್ಲಿಯವರೆಗೆ ಹಲವಾರು ಕಬ್ಬು ಕಾರ್ಖಾನೆಗಳು ಈ ಆದೇಶ ಪಾಲಿಸಿಲ್ಲ ಎಂದಿದ್ದಾರೆ. ರೈತರು ಮತ್ತು ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಸರ್ಕಾರ ವಿಧಾನಸಭೆ ಅಧಿವೇಶನದಲ್ಲಿ ಏಪ್ರಿಲ್ 2015ರೊಳಗಾಗಿ ರೈತರಿಗೆ ನೀಡಬೇಕಾದ ಬಾಕಿ ಹಣವನ್ನು ನೀಡುತ್ತೇವೆಂದು ವಾಗ್ದಾನ ನೀಡಿತ್ತು ಎಂದು ಹೇಳಿದ ಶೆಟ್ಟರ್, ರಾಜ್ಯದಲ್ಲಿ ರೈತರು ಗಳಿಸಿದ ಕಬ್ಬನ್ನು ಕಟಾವು ಮಾಡಲು ಯಾವುದೇ ಕಾರ್ಖಾನೆಗಳು ಮುಂದೆ ಬರುತ್ತಿಲ್ಲ. ಸರ್ಕಾರ ನಿಗದಿಪಡಿಸಿದ್ದ 2500ರೂ.ಗಳನ್ನು ಕಾರ್ಖಾನೆಗಳು ಇದುವರೆಗೂ ರೈತರಿಗೆ ನೀಡಿಲ್ಲ ಎಂದಿದ್ದಾರೆ. ಕಾರ್ಖಾನೆಗಳು 900 ಕೋಟಿ ಮೊತ್ತದ ಬಾಕಿಯನ್ನು ಪಾವತಿಸದೆ ಕಬ್ಬು ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಾರಣ ಕೂಡಲೇ ಕಬ್ಬು ಬೆಳೆಗಾರರಿಗೆ ಬಾಕಿ ಹಣ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.