ಬೆಂಗಳೂರು: ಬೆಂಗಳೂರಿನಲ್ಲಿ ಬಾಲಕನೊಬ್ಬ(10 ವರ್ಷ) ಬೆಳ್ಳಂದೂರು ಕೆರೆಯನ್ನು ಸಂಪರ್ಕಿಸುವ ರಾಜಕಾಲುವೆಗೆ ಬಿದ್ದು ಮೃತನಾದ ಘಟನೆ ನಡೆದಿದೆ. ನಿನ್ನೆ ಸಂಜೆ ರಾಜಕಾಲುವೆಗೆ ಬಿದ್ದಿದ್ದ ಬಾಲಕ ಕಾಲುವೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ.
ಸ್ನೇಹಿತರ ಜೊತೆ ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ರಾಜಕಾಲುವೆಗೆ ಬಿದ್ದಿತ್ತು. ಚೆಂಡನ್ನು ಮೇಲೆಕ್ಕತ್ತಲು ಬಾಲಕ ಜುನೇದ್ ಪ್ರಯತ್ನಿಸಿದಾಗ ಆಯತಪ್ಪಿ ರಾಜಕಾಲುವೆಗೆ ಬಿದ್ದಿದ್ದ. ನೀರು ರಭಸವಾಗಿ ಹರಿದಿದ್ದರಿಂದ ಬಾಲಕನು ಕೊಚ್ಚಿಕೊಂಡು ಹೋಗಿದ್ದ.
ಅಗ್ನಿಶಾಮಕ ದಳ, ಪೊಲೀಸರು ಸತತ 18 ಗಂಟೆಗಳ ಕಾರ್ಯಾಚರಣೆ ನಡೆಸಿದ ಬಳಿಕ ಬಾಲಕನ ಶವ ಪತ್ತೆಯಾಗಿದೆ. ಜುನೇದ್ ಉತ್ತರಪ್ರದೇಶ ಮೂಲದ ದಂಪತಿ ಮಗನಾಗಿದ್ದು, ಮಗನ ಸಾವಿನಿಂದ ದಂಪತಿ ತೀವ್ರ ಶೋಕಪೂರಿತರಾಗಿದ್ದಾರೆ.