ಬೆಂಗಳೂರು: ನೀನು ವರದಿ ಕೊಡಬೇಕು, ನಿನ್ನಪ್ಪನೂ ಕೊಡಬೇಕು. ಇವತ್ತಿನಿಂದ ನಿನಗೆ ಶನಿ ಕಾಟ ಶುರುವಾಗಿದೆ. ಇವತ್ತು ಸಂಜೆಯೊಳಗೆ ವರದಿ ಕೊಡಬೇಕು. ವರದಿ ಕೊಡದಿದ್ದರೆ ನಿನಗೊಂದು ಗತಿ ಕಾಣಿಸುತ್ತೇನೆ ಎಂದು ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎಸ್.ಆರ್.ರಮೇಶ್ ತಮಗೆ ದೂರವಾಣಿ ಮೂಲಕ ಧಮ್ಕಿ ಹಾಕಿದ್ದಾರೆಂದು ಬಿಬಿಎಂಪಿ ಯಲಹಂಕ ವಲಯ ಆಯುಕ್ತ ಸರ್ಫರಾಜ್ ಖಾನ್ ದೂರು ನೀಡಿದ್ದಾರೆ.
ನೆಲ ಅಗೆದು ಒಎಫ್ ಸಿ ಕೇಬಲ್ ಹಾಕದೆ ಏನ್ ಮಾಡ್ತಿದ್ಯಾ? ಎಂದು ದೂರವಾಣಿ ಮೂಲಕ ರಮೇಶ್ ಪ್ರಶ್ನಿಸಿದಾಗ, ಇದು ನನ್ನ ವ್ಯಾಪ್ತಿಗೆ ಬರಲ್ಲ ಎಂದು ಸರ್ಫರಾಜ್ ಖಾನ್ ತಿಳಿಸಿದ್ದರು. ಆದರೂ ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ಇಂದು ಸಂಜೆಯೊಳಗೆ ನೀನು ವರದಿ ಕೊಡಬೇಕು. ಇಲ್ಲದಿದ್ದರೆ ನಿನಗೊಂದು ಗತಿ ಕಾಣಿಸುವುದಾಗಿ ಧಮ್ಕಿ ಹಾಕಿದ್ದರಂತೆ. ಅಲ್ಲದೇ ದೂರವಾಣಿಯಲ್ಲಿ ಅವಾಚ್ಯವಾಗಿ ಬೈದಿರುವುದಾಗಿ ಸರ್ಫರಾಜ್ ಖಾನ್ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ರಮೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.
ನಾನು ಯಾವುದೇ ಬೆದರಿಕೆ ಹಾಕಿಲ್ಲ: ರಮೇಶ್
ನಾನು ಯಾವುದೇ ಬೆದರಿಕೆ ಹಾಕಿಲ್ಲ. ಕಾಮಗಾರಿ ಸಂಬಂಧ ಸರ್ಫರಾಜ್ ಖಾನ್ ಅವರಿಗೆ ಕರೆ ಮಾಡಿರುವುದಾಗಿ ಪಾಲಿಕೆ ಮಾಜಿ ಸದಸ್ಯ ಎಸ್.ಆರ್.ರಮೇಶ್ ಪ್ರತಿಕ್ರಿಯೆ ನೀಡಿದ್ದಾರೆ.
-ಉದಯವಾಣಿ