ಬೆಂಗಳೂರು, ಮೇ 27: ಗದಗ-ವಾಡಿ ನಡುವೆ ರೈಲು ಮಾರ್ಗ ನಿರ್ಮಿಸಲು ಆರು ತಿಂಗಳಲ್ಲಿ 1100 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ನಂತರ ಸುದ್ದಿಗಾರರರೊಂದಿಗೆ ಮಾತನಾಡಿದ ಮಾಜಿ ಶಾಸಕ ಬಸವರಾಜ ರಾಯರೆಡ್ಡಿ, ನೆನೆಗುದಿಗೆ ಬಿದ್ದಿರುವ ರೈಲ್ವೆ ಮಾರ್ಗಕ್ಕೆ 1100 ಎಕರೆ ಜಮೀನಿ ಬೇಕಿದ್ದು, ಇನ್ನು ಆರು ತಿಂಗಳಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ನಿಗಮದ ಮೂಲಕ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಒಟ್ಟಾರೆ ಈ ಯೋಜನೆಗಳು ಪೂರ್ಣಗೊಳ್ಳಲು 2500 ಎಕರೆ ಜಮೀನು ಅಗತ್ಯವಿದ್ದು, ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ 15 ರೈಲ್ವೆ ಯೋಜನೆಗಳು ಸೇರಿದಂತೆ 4500 ಎಕರೆ ಜಮೀನು ಬೇಕಾಗಿದೆ.
ಗದಗ-ವಾಡಿ ಯೋಜನೆಗೆ ರಾಜ್ಯ ಸರ್ಕಾರವೊಂದೇ ಶೇ.50ರಷ್ಟು ಸಹಾಯ ನೀಡಲಿದೆ. ತಳಕಲ್ನಿಂದ ಕುಷ್ಟಗಿವರೆಗೆ 58 ಕಿ.ಮೀ, ವಾಡಿಯಿಂದ ಶಹಪುರದವರೆಗೆ 42 ಕಿ.ಮೀ ರೈಲ್ವೆ ಮಾರ್ಗ ನಿರ್ಮಿಸಲಿದೆ ಅಲ್ಲದೆ ಹಾಸನ ಬೆಂಗಳೂರು ಮಾರ್ಗ, ಬೀದರ್-ಗುಲ್ಬರ್ಗ ನಡುವೆ ಸಣ್ಣ ಪ್ರಮಾಣದಲ್ಲಿ ಜಮೀನು ಅಗತ್ಯವಿದ್ದು , ರಾಜ್ಯ ಸರ್ಕಾರವೇ ನೇರವಾಗಿ ಖರೀದಿಗೆ ಮುಂದಾಗಿದೆ. ತ್ವರಿತವಾಗಿ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ರೈಲ್ವೆ ಅಧಿಕಾರಿಗಳಿಗೆ ಸಿಎಂ ಮನವಿ ಮಾಡಿದ್ದಾರೆ. ಈಗಾಗಲೇ ಕೊಪ್ಪಳ-ರಾಯಚೂರು ರೈಲ್ವೆ ಯೋಜನೆ ಶೇ.50ರಷ್ಟು ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು.