ಬೆಂಗಳೂರು, ಮೇ 16: ಬಸ್ ನಿಲ್ದಾಣಕ್ಕೆ ಹೋಗಲು 7 ಮಂದಿ ಪ್ರಯಾಣಿಕರು ರಸ್ತೆ ದಾಟುತ್ತಿದ್ದಾಗ ಅತಿವೇಗವಾಗಿ ಬಂದ ಕಾರು ಇಬ್ಬರು ಮಹಿಳೆಯರನ್ನು ಬಲಿ ತೆಗೆದುಕೊಂಡಿದ್ದು, 6 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಪಘಾತದಲ್ಲಿ ರಾಧಾ ರಾಮಚಂದ್ರ (56) ಮತ್ತು ಸೌಮ್ಯ ಎಂಬುವರು ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ 9.10ರಲ್ಲಿ ಹೊಸೂರು ರಸ್ತೆಯಲ್ಲಿನ ಬೊಮ್ಮಸಂದ್ರ ಸಮೀಪದ ಎನ್.ನಾಗರಗೇಟ್ ಬಳಿ ಇವರೆಲ್ಲ ರಸ್ತೆ ದಾಟಲು ಮುಂದಾದರು.
ಈ ವೇಳೆ ಹೊಸೂರು ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಇವರತ್ತ ನುಗ್ಗಿದ ಪರಿಣಾಮ ಸ್ಥಳದಲ್ಲೇ ರಾಧ ಎಂಬುವರು ಮೃತಪಟ್ಟಿದ್ದು, ಗಂಭೀರ ಗಾಯಗೊಂಡ ಏಳು ಮಂದಿಯ ಪೈಕಿ ಸೌಮ್ಯಾ ಎಂಬುವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇನ್ನುಳಿದ ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದ್ದಿ ತಿಳಿದ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕಾಗಮಿಸಿ ಅಪಘಾತವೆಸಗಿದ ಹೊಂಡಾಸಿಟಿ ಕಾರು ಚಾಲಕ , ಸಾಫ್ಟ್ವೇರ್ ಎಂಜಿನಿಯರ್ ಕಾರ್ತಿಕ್ ಎಂಬಾತನನ್ನು ಬಂಧಿಸಿದ್ದು , ಈತ ಮೂಲತಃ ತಮಿಳುನಾಡಿನವನು. ಅಪಘಾತದಿಂದಾಗಿ ಈ ಭಾಗದಲ್ಲಿ ರಸ್ತೆ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿದ್ದರಿಂದ ವಾಹನ ಸವಾರರು ನಿಂತಲ್ಲೇ ನಿಂತಿದ್ದು ಕಂಡುಬಂತು. ತದನಂತರ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.