ಬೆಂಗಳೂರು: ಗೆಳತಿಯನ್ನು ಕೊಲೆ ಮಾಡಿದ್ದ ವ್ಯಕ್ತಿಯೊಬ್ಬ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ’ ದೃಶ್ಯ’ ಚಿತ್ರವನ್ನು 10 ಬಾರಿ ನೋಡಿ ಅದರಲ್ಲಿದ್ದಂತೆ ಸಾಕ್ಷ್ಯ ನಾಶ ಮಾಡಿ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳಲೆತ್ನಿಸಿದ್ದು ಇದೀಗ ಆತನನ್ನು ಬಂಧಿಸಲಾಗಿದೆ.
ಜೆ.ಪಿ. ನಗರದ 6 ನೇ ಹಂತದ ನಿವಾಸಿ ಯೋಗೇಶ್ ಬಂಧಿತ ಆರೋಪಿಯಾಗಿದ್ದು, ಈತ ತಾನು ಪ್ರೀತಿಸುತ್ತಿದ್ದ ತಿಪ್ಪಸಂದ್ರದ ಶಿಲ್ಪಾ ಎಂಬಾಕೆಯನ್ನು ಫೆಬ್ರವರಿ 24 ರಂದು ಆಕೆಯ ಮನೆಯಲ್ಲೇ ಹತ್ಯೆ ಮಾಡಿ ಬಳಿಕ ಶವವನ್ನು ಕಾರಿನಲ್ಲಿ ಸಾಗಿಸಿ ತುಮಕೂರು ಜಿಲ್ಲೆಯ ಕೊಂಡ್ಲಿ ಕ್ರಾಸ್ ಬಳಿಯ ಗಣಿಗಾರಿಕೆ ನಡೆಯುತ್ತಿದ್ದ ಅರಣ್ಯ ಪ್ರದೇಶದಲ್ಲಿ ಸುಟ್ಟು ಹಾಕಿದ್ದ.
ಹದಿನೈದು ದಿನಗಳ ನಂತರ ಶಿಲ್ಪಾಳ ಶವ ಸುಟ್ಟು ಹಾಕಿದ್ದ ಜಾಗಕ್ಕೆ ಮತ್ತೆ ತೆರಳಿದ್ದ ಯೋಗೇಶ್ ಮೂಳೆಗಳನ್ನೆಲ್ಲಾ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಕೊಂಡು ಕೆ.ಬಿ. ಕ್ರಾಸ್ ನ ಬಾಣಸಂದ್ರ ಅರಳಗುಪ್ಪೆ ಗ್ರಾಮದ ಬಳಿ ಇರುವ 70 ಅಡಿ ಆಳದ ಹೇಮಾವತಿ ನಾಲೆಗೆ ಎಸೆಯುವ ಮೂಲಕ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ. ಪೊಲೀಸರ ಆರಂಭಿಕ ವಿಚಾರಣೆಯಲ್ಲಿ ಯೋಗೇಶ್ ತನಗೇನೂ ಗೊತ್ತೇ ಇಲ್ಲದವನಂತೆ ನಟಿಸಿದ್ದ.
ಆದರೆ ಶಿಲ್ಪಾ ಕಾಣೆಯಾದ ಫೆಬ್ರವರಿ 24 ರಂದು ಯೋಗೇಶ್ ಆಕೆಯ ಮನೆ ಬಳಿ ಬಂದಿದ್ದ ಮಾಹಿತಿ ಪಡೆದಿದ್ದ ಪೊಲೀಸರು ಆತನ ಚಲನಚಲನದ ಮೇಲೆ ನಿಗಾ ಇಟ್ಟಿದ್ದರು. ಅನುಮಾನ ಖಚಿತಪಟ್ಟ ಬಳಿಕ ಯೋಗೇಶನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ತನ್ನ ತಪ್ಪೊಪ್ಪಿಕೊಂಡಿದ್ದು, ವಿವಾಹವಾಗುವಂತೆ ಶಿಲ್ಪಾ ಪದೇ ಪದೇ ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾನೆ.