ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಲೋಕಪ್ಪನಹೊಲ ಗ್ರಾಮದ ಸುತ್ತಮುತ್ತ ಭಾನುವಾರ ರಾತ್ರಿ ಸುರಿದ ಆಲಿಕಲ್ಲು ಮಳೆಗೆ ನೆಲ ಕಚ್ಚಿರುವ ಭತ್ತದ ಬೆಳೆ
ಹುಬ್ಬಳ್ಳಿ: ಉತ್ತರ ಕರ್ನಾಟಕದ ಹಲವೆಡೆ ಹಾಗೂ ಹೈದರಾಬಾದ್ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಗಾಳಿ–ಮಳೆಯಿಂದಾಗಿ ವ್ಯಾಪಕ ಬೆಳೆ ಹಾಗೂ ಆಸ್ತಿ ಹಾನಿ ಸಂಭವಿಸಿದೆ.
ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಬಿದ್ದಿರುವುದರಿಂದ ಗಂಗಾವತಿ ತಾಲ್ಲೂಕಿನಲ್ಲಿ ರೂ 98 ಕೋಟಿ ಮೌಲ್ಯದ ಸಾವಿರಾರು ಹೆಕ್ಟೇರ್ ಭತ್ತದ ಬೆಳೆ ನಾಶವಾಗಿದೆ.
ಕೊಪ್ಪಳ ತಾಲ್ಲೂಕಿನ ಎಂಟು ಗ್ರಾಮಗಳಲ್ಲಿ ಬೆಳೆ ಹಾನಿ ಸಂಭವಿಸಿದೆ. ತುಂಗಭದ್ರಾ ನದಿಪಾತ್ರದ ಹತ್ತಾರು ಗ್ರಾಮಗಳ ತೋಟಗಳಲ್ಲಿ ಬಾಳೆ ಗೊನೆಗಳು ಮುರಿದಿವೆ.
ರಸ್ತೆತಡೆ: ಬೆಳೆ ಹಾನಿ ಮಾಹಿತಿ ನೀಡಲು ಹೋದರೆ ಅಧಿಕಾರಿಗಳು ಸ್ಪಂದಿಸಲಿಲ್ಲ ಎಂದು ಆಕ್ರೋಶಗೊಂಡ ರೈತರು ತಾಲ್ಲೂ
ಕಿನ ಶ್ರೀರಾಮನಗರ, ಕಲ್ಗುಡಿ, ವಿದ್ಯಾನಗರದಲ್ಲಿ ರಸ್ತೆತಡೆ ನಡೆಸಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ವೆಂಕಟಗಿರಿ ಹೋಬಳಿ ರೈತರು ಎಪಿಎಂಸಿ ಕಾರ್ಯದರ್ಶಿಗೆ ಮುತ್ತಿಗೆ ಹಾಕಿದರು.
ವಿಜಯಪುರ, ಬಳ್ಳಾರಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿಯೂ ಭಾನುವಾರ ರಾತ್ರಿ ಆಲಿಕಲ್ಲು ಸಮೇತ ಭಾರಿ ಮಳೆ ಸುರಿದಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಆಲಿಕಲ್ಲು ಮಳೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ. ಮಳೆಯಿಂದಾಗಿ ಹಲವೆಡೆ ಭತ್ತ, ಹತ್ತಿ, ಕಬ್ಬು ಬೆಳೆ ನಾಶವಾಗಿದೆ.
ಮರಿಯಮ್ಮನಹಳ್ಳಿ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಭತ್ತಕ್ಕೆ ಹಾನಿಯಾಗಿದೆ. ಹೀರೇಕಾಯಿ, ಹತ್ತಿ, ಬಾಳೆ, ಟೊಮೆಟೊ, ಮೆಕ್ಕೆಜೋಳ, ಮಲ್ಲಿಗೆ ಹೂವಿನ ಗಿಡಗಳಿಗೆ ಹಾನಿಯಾಗಿದೆ. ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕುರುಗೋಡು, ಕುಡತಿನಿ ಸುತ್ತಮುತ್ತಲೂ ಭತ್ತ ಮತ್ತು ಸಜ್ಜೆ ಬೆಳೆ ನೆಲಕ್ಕೊರಗಿದೆ.
ವಿಜಯಪುರ ಜಿಲ್ಲೆಯ ಸಿಂದಗಿ, ತಾಳಿಕೋಟೆ ಸಮೀಪದ ತುಂಬಗಿ ಗ್ರಾಮದಲ್ಲಿ ತೋಟಗಾರಿಕೆ ಬೆಳೆಗಳಿಗೆ ತೀವ್ರ ಹಾನಿ ಉಂಟಾಗಿದೆ.
ಬಸವನ ಬಾಗೇವಾಡಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ತಡರಾತ್ರಿ ಜಿಟಿಜಿಟಿ ಮಳೆ ಸುರಿದಿದೆ. ಮುದ್ದೇಬಿಹಾಳ ತಾಲ್ಲೂಕಿನ ವಿವಿಧೆಡೆ ಸೋಮವಾರ ನಸುಕಿನಲ್ಲಿ ಮಳೆಯಾಗಿದೆ.
ಭಾರಿ ಹಾನಿ
ಸಿಂದಗಿ ತಾಲ್ಲೂಕಿನ ಬಂದಾಳ ಗ್ರಾಮದಲ್ಲಿ ಭಾರಿ ಬಿರುಗಾಳಿ–ಮಳೆಗೆ ಉದ್ಘಾಟನೆಗೆ ಸಿದ್ಧಗೊಂಡಿದ್ದ ಶುದ್ಧ ಕುಡಿಯುವ ನೀರು ಘಟಕದ ಯಂತ್ರಗಳು ಹಾನಿಗೀಡಾಗಿವೆ. ಪಟ್ಟಣದಲ್ಲಿ ಮನೆಗಳಿಗೆ ಅಳವಡಿಸಿದ್ದ ಶೇ 80ಕ್ಕೂ ಹೆಚ್ಚು ಪ್ರಮಾಣದ ಸೌರಶಕ್ತಿ ಪ್ಯಾನೆಲ್ಗಳಿಗೆ ಹಾನಿಯಾಗಿದೆ.
ವಿದ್ಯುತ್ ತಂತಿಗಳು ತುಂಡಾಗಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇಂಡಿ ತಾಲ್ಲೂಕಿನಲ್ಲೂ ಮಳೆಯ ಅಬ್ಬರ ಮುಂದುವರೆದಿದ್ದು, 27 ಟ್ರಾನ್ಸ್ಫರ್ಮರ್್ಗಳು ಮಳೆಯ ಹೊಡೆತಕ್ಕೆ ಸುಟ್ಟಿದ್ದು, ಕಂಬಗಳು ಧರೆಗುರುಳಿವೆ.